ಜೈಲು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ರಾಜೀವ್ ಗಾಂಧಿ ಹತ್ಯಾ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಆರೋಪಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ವೆಲ್ಲೋರ್ ಜೈಲಿನಿಂದ ಚೆನ್ನೈ ಉಪನಗರದ ಪುಜಲ್ ಜೈಲಿಗೆ ಸ್ಥಳಾಂತರಗೊಳಿಸಲಾಗಿದೆ.
ಭಾರೀ ಭದ್ರತೆಯಲ್ಲಿ 44ರ ಹರೆಯದ ನಳಿನಿಯನ್ನು ವೆಲ್ಲೋರ್ ಕಾರಾಗೃಹದಿಂದ ಪುಜಲ್ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ.
ತನಗೆ ಜೈಲು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಇದೇ ತಿಂಗಳಾರಂಭದಲ್ಲಿ ನಳಿನಿ ದೂರು ನೀಡಿದ್ದಳು. ಕಾರಾಗೃಹದ ಅಧಿಕಾರಿಗಳು ನನಗೆ ಹಲ್ಲೆ ಮಾಡುತ್ತಿದ್ದು, ನಾನು ಜೀವ ಬೆದರಿಕೆಯಡಿಯಲ್ಲಿ ದಿನ ದೂಡುತ್ತಿದ್ದೇನೆ ಎಂದೂ ಆಕೆ ಹೇಳಿದ್ದಳು.
ಕಾರಾಗೃಹಗಳ ಎಡಿಜಿಪಿ ಡಾ. ಕೆ.ಆರ್. ಶ್ಯಾಮಸುಂದರ್ ಸೇರಿದಂತೆ ಸಂಬಂಧಪಟ್ಟವರಿಗೆ ಈ ಸಂಬಂಧ ನಳಿನಿ ಪತ್ರ ಬರೆದಿದ್ದಳು. ತನಗೆ ಆಹಾರದಲ್ಲಿ ವಿಷ ಹಾಕಿ ಕೊಲ್ಲಲು ಯತ್ನಿಸಲಾಗುತ್ತಿದೆ, ದಿನಂಪ್ರತಿ ಹಲ್ಲೆ ನಡೆಸಲಾಗುತ್ತಿದೆ ಎಂದು ಆಕೆ ದೂರಿಕೊಂಡಿದ್ದಳು.
ಆರೋಪಗಳ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರವು ತನಿಖೆ ನಡೆಸಲೆಂದು ಕಾರಾಗೃಹದ ಉನ್ನತ ಅಧಿಕಾರಿ ನೇತೃತ್ವದ ಸಮಿತಿಯೊಂದನ್ನು ರಚಿಸಿತ್ತು.
ಇತ್ತೀಚೆಗಷ್ಟೇ ತಮಿಳುನಾಡು ಸರಕಾರವು ನಳಿನಿಯ ಕ್ಷಮಾದಾನ ಅರ್ಜಿಯನ್ನು ತಳ್ಳಿ ಹಾಕಿದ್ದನ್ನು ಇದೀಗ ಸ್ಮರಿಸಬಹುದಾಗಿದೆ. ಕಾರಾಗೃಹ ಸಲಹಾ ಸಮಿತಿಯ ಶಿಫಾರಸಿನಂತೆ ಮುಖ್ಯಮಂತ್ರಿ ಕರುಣಾನಿಧಿಯವರ ನೇತೃತ್ವದ ಸರಕಾರ ನಳಿನಿಯನ್ನು ಅವಧಿಗೆ ಮುಂಚೆ ಬಿಡುಗಡೆ ಮಾಡುವುದಕ್ಕೆ ತನ್ನ ಆಕ್ಷೇಪವನ್ನು ಮದ್ರಾಸ್ ಹೈಕೋರ್ಟ್ಗೆ ಸಲ್ಲಿಸಿತ್ತು.
1998ರ ಜನವರಿಯಲ್ಲಿ ಇತರ 25 ಮಂದಿಯೊಂದಿಗೆ ನಳಿನಿಗೂ ಮರಣದಂಡನೆ ಶಿಕ್ಷೆ ತೀರ್ಪು ನೀಡಲಾಗಿತ್ತು. ಆದರೆ ಆಕೆಯ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿ, ಜೀವಾವಧಿ ಶಿಕ್ಷೆಗೆ ಇಳಿಕೆಗೊಳಿಸಿತ್ತು.
ಕೆಲ ತಿಂಗಳುಗಳ ಹಿಂದಷ್ಟೇ ವೆಲ್ಲೋರ್ ಜೈಲಿನ ನಳಿನಿಯ ಕೊಠಡಿಯಲ್ಲಿ ಮೊಬೈಲ್ ಫೋನ್ ಕೂಡ ಪತ್ತೆಯಾಗಿತ್ತು. ಈ ಸಂಬಂಧ ತನಿಖೆಗಳು ನಡೆಯುತ್ತಿದ್ದು, ಮೂಲಗಳ ಪ್ರಕಾರ ನಳಿನಿ ಎಲ್ಟಿಟಿಇ ಮುಖಂಡರ ಜತೆ ಸಂಪರ್ಕದಲ್ಲಿದ್ದಳು ಎಂದು ಹೇಳಲಾಗಿದೆ.