ಉತ್ತರ ಕಾಶ್ಮೀರದ ಸೋಪೂರ್ನಲ್ಲಿ ಬಿಲಾಲ್ ಅಹ್ಮದ್ ವಾನಿ ಎಂಬ ಯುವಕನ ಸಾವಿನ ಹಿನ್ನೆಲೆಯಲ್ಲಿ ಸಿಆರ್ಪಿಎಫ್ 92 ಬೆಟಾಲಿಯನ್ ಮುಖ್ಯ ಕೇಂದ್ರದ ಹೊರಗಡೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದು ಇದು ಸೋಮವಾರವೂ ಮತ್ತೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆಯನ್ನು ನಿಗ್ರಹಿಸಲು ಅರೆಸೇನಾ ಪಡೆ ಗುಂಡು ಹಾರಿಸಿದ ಸಂದರ್ಭ ಒಂಭತ್ತರ ಹರೆಯದ ಹುಡುಗನೂ ಸೇರಿದಂತೆ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಇದೇ ವೇಳೆ 16ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.
ಪ್ರತಿಭಟನೆಕಾರರು ಕರ್ಫ್ಯೂ ಉಲ್ಲಂಘಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನೂ ಕೂಗುತ್ತಾ, ಹಸಿರು ಬಾವುಟಗಳನ್ನು ಪ್ರದರ್ಶಿಸುತ್ತಾ ಮೃತದೇಹವನ್ನು ಹೊತ್ತು ಮೆರವಣಿಗೆ ನಡೆಸಿದರು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುವುದನ್ನು ಅರಿತ ಭದ್ರತಾ ಪಡೆ ಅಶ್ರುವಾಯು ಪ್ರಯೋಗಿಸಿ ಗುಂಪನ್ನು ಚದುರಿಸಲು ಪ್ರಯತ್ನಿಸಲಾಯಿತು. ಈ ಸಂದರ್ಭ ಹಿಂಸಾಚಾರ ಭುಗಿಲೆದ್ದ ಕಾರಣ ಗುಂಡು ಹಾರಿಸಿದ ಸಂದರ್ಭ ಇಬ್ಬರು ಮೃತಪಟ್ಟಿದ್ದಾರೆ.
ಇದೀಗ ಪ್ರತಿಭಟನಾಕಾರರನ್ನು ಭದ್ರತಾ ಪಡೆ ಸಂಪೂರ್ಣವಾಗಿ ನಿಯಂತ್ರಿಸಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಪೊಲೀಸ್ ಮತ್ತು ಅರೆಸೇನಾ ಪಡೆಗಳು ಪ್ರಮುಖ ಬೀದಿಗಳಲ್ಲಿ ಗಸ್ತು ತಿರುಗುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಿರತವಾಗಿದೆ. ಜೊತೆಗೆ, ಮುಂಜಾಗರೂಕತೆ ವಹಿಸಲು ಇಡೀ ಪರಿಸರದಲ್ಲಿ ಎಸ್ಎಂಎಸ್ ಸಂದೇಶಗಳನ್ನು ಕಳುಹಿಸುವುದನ್ನು ನಿಗ್ರಹಿಸಲಾಗಿದೆ.
ಇದೇ ವೇಳೆ ಮತ್ತೊಂದೆಡೆ ಉಗ್ರಗಾಮಿಗಲು ಕರ್ಫ್ಯೂ ನಿರತ ಸೋಪೋರ್ನ ಪೊಲೀಸ್ ಠಾಣೆಯ ಮೇಲೆ ಗುಂಡು ಹಾರಿಸಿದ್ದಾರೆ. ಆದರೆ ಈ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಉಗ್ರರ ದಾಳಿಗೆ ಪ್ರತಿದಾಳಿಯನ್ನು ಪೊಲೀಸರು ಮಾಡಿದಾಗ ಉಗ್ರರು ಪರಾರಿಯಾಗಿದ್ದಾರೆ ಎನ್ನಲಾಗಿದೆ.