ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿನ ಹಿಂಸಾಚಾರವು ದಕ್ಷಿಣಕ್ಕೂ ಹರಡಿದ್ದು, ಇಂದು ಪ್ರತಿಭಟನಾಕಾರರು ಸಂಘರ್ಷಕ್ಕೆ ಇಳಿದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಗೋಲಿಬಾರಿಗೆ ಅನಂತ್ನಾಗ್ ಜಿಲ್ಲೆಯಲ್ಲಿ ಮೂವರು ಯುವಕರು ಬಲಿಯಾಗಿದ್ದಾರೆ. ಗಲಭೆಯಿಂದಾಗಿ ಕಣಿವೆಯಲ್ಲಿನ ಹಲವು ನಗರಗಳಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.
ಕಣಿವೆಯಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರಗಳಿಗೆ ಇದುವರೆಗೆ ಬಲಿಯಾದವರ ಸಂಖ್ಯೆ ಇದರೊಂದಿಗೆ ಎಂಟಕ್ಕೇರಿದೆ. ಅಲ್ಲದೆ ಮೂರು ವಾರಗಳಲ್ಲಿ ಹನ್ನೊಂದು ಯುವಕರು ಸಾವನ್ನಪ್ಪಿದಂತಾಗಿದೆ. ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯ ನಂತರವಷ್ಟೇ ಈ ಸಾವುಗಳು ಸಂಭವಿಸಿವೆ.
ಇಂದು ಸಾವನ್ನಪ್ಪಿದವರನ್ನು ಇಶ್ಫಾಕ್ ಅಹ್ಮದ್ ಖಾಂಡೇ (15), ಇಮ್ತಿಯಾಜ್ ಅಹ್ಮದ್ ಇತೂ (17) ಮತ್ತು ಶೂಜತಾಲ್ ಇಸ್ಲಾಂ (19) ಎಂದು ಪೊಲೀಸರು ಗುರುತಿಸಿದ್ದಾರೆ. ಶ್ರೀನಗರದಿಂದ 55 ಕಿಲೋ ಮೀಟರ್ ದೂರದಲ್ಲಿರುವ ಅನಂತ್ನಾಗ್ ಜಿಲ್ಲೆಯ ಆಂಚಿದೂರಾ ಎಂಬಲ್ಲಿ ಸಿಆರ್ಪಿಎಫ್ ಭದ್ರತಾ ಸಿಬ್ಬಂದಿಗಳ ಮೇಲೆ ಗುಂಪು ಕಲ್ಲು ತೂರಾಟ ನಡೆಸಿದ ನಂತರ ಗುಂಡು ಹಾರಿಸಲಾಗಿತ್ತು.
ಇಬ್ಬರು ವ್ಯಕ್ತಿಗಳು ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಇಲ್ಲಿನ ಮೆಡಿಕಲ್ ಕಾಲೇಜಿಗೆ ಸೇರಿಸಲಾಯಿತು. ಆದರೆ ಖಾಂಡೇ ಮತ್ತು ಇತೂ ಸ್ಥಳದಲ್ಲೇ ಸಾವನ್ನಪ್ಪಿದರೆ, ಇಸ್ಲಾಂ ಆಸ್ಪತ್ರೆ ಹಾದಿಯಲ್ಲಿ ಸಾವನ್ನಪ್ಪಿದ್ದಾನೆ.
ಯುವಕರನ್ನು ಸಿಆರ್ಪಿಎಫ್ ಹತ್ಯೆಗೈದ ಸುದ್ದಿ ಹರಡುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಜನ ರಸ್ತೆಗಿಳಿದು, ಸೇನೆಯ ಮೂರಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಗಳು ಹೇಳಿವೆ.
ಹಿಂಸಾಚಾರ ಹಿನ್ನೆಲೆಯಲ್ಲಿ ಉತ್ತರ ಕಾಶ್ಮೀರದಲ್ಲಿ ಮೊಬೈಲ್ ಹಾಗೂ ಕಣಿವೆ ರಾಜ್ಯದಲ್ಲಿ ಎಸ್ಎಂಎಸ್ ಸೇವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ರಾಜ್ಯ ಸರಕಾರದ ಸೂಚನೆ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಗಿದೆ.