ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿ ಹಗರಣ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ವಿಪಕ್ಷಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದರೆ, ಮತ್ತೊಂದೆಡೆ ರಾಜ್ಯಪಾಲ ಭಾರದ್ವಾಜ್ ಅವರು ದೆಹಲಿಯಲ್ಲಿ ಠಿಕಾಣಿ ಹೂಡಿರುವುದು ರಾಜ್ಯರಾಜಕಾರಣದಲ್ಲಿ ಏನು ನಡೆಯಲಿದೆ ಎಂಬ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ, ಬಳ್ಳಾರಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಕರ್ನಾಟಕ ಜಂಗಲ್ ರಾಜ್ ಆಗಿದೆ. ಆ ನಿಟ್ಟಿನಲ್ಲಿ ಸಂವಿಧಾನದ 355ನೇ ವಿಧಿ ಜಾರಿ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಗೃಹಸಚಿವ ಪಿ.ಚಿದಂಬರಂ ಅವರ ಜತೆ ಮಹತ್ವದ ಚರ್ಚೆ ನಡೆಸಿದರು.
ರಾಜ್ಯಪಾಲರು ಕೇಂದ್ರದ ಕಾಂಗ್ರೆಸ್ ವರಿಷ್ಠರೊಂದಿಗೆ ನಡೆಸಿದ ಮಾತುಕತೆಯಲ್ಲಿ ರಾಜ್ಯದಲ್ಲಿನ ಪ್ರಸಕ್ತ ವಿದ್ಯಮಾನ, ಲೋಕಾಯುಕ್ತ ಸಂತೋಷ್ ಹೆಗ್ಡೆ ರಾಜೀನಾಮೆ ಮತ್ತು ಆ ನಂತರ ರಾಜೀನಾಮೆ ವಾಪಸ್ ಪಡೆದ ವಿಷಯಗಳು ಚರ್ಚೆಯಾದವು. ಆದರೆ ಸಮಾಲೋಚನೆಯ ವಿವರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಚರ್ಚಿಸಲು ರಾಜ್ಯಪಾಲರು ನಿರಾಕರಿಸಿದರು.
ಸಂವಿಧಾನದ 355ನೇ ವಿಧಿ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಹೊರಗಿನ ಆಕ್ರಮಣ, ಆಂತರಿಕ ಕ್ಷೋಭೆಯಿಂದ ಎಲ್ಲ ರಾಜ್ಯಗಳನ್ನು ರಕ್ಷಿಸುವುದು ಕೇಂದ್ರ ಸರಕಾರದ ಕರ್ತವ್ಯ ಎಂದು 355ನೇ ವಿಧಿ ಹೇಳುತ್ತದೆ ಎಂದಷ್ಟೇ ಉತ್ತರಿಸಿದರು.
ರಾಜ್ಯದ ವ್ಯವಹಾರದಲ್ಲಿ ಮಧ್ಯಪ್ರವೇಶಿಸುವ ಅಧಿಕಾರ ಕೇಂದ್ರಕ್ಕೆ ಇದೆ ಎಂದ ಅವರು, ಬಳ್ಳಾರಿಯನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿ ಇದೆ. ಕೆಲವು ಸಚಿವರು ತಮ್ಮ ಇಷ್ಟದಂತೆಯೇ ಸರಕಾರದ ಆದೇಶಗಳನ್ನು ಹೊರಡಿಸುತ್ತಿದ್ದಾರೆ ಎಂದು ರೆಡ್ಡಿ ಬ್ರದರ್ಸ್ ವಿರುದ್ಧ ಮತ್ತೊಮ್ಮೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.