ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಂಗಿ ಬೆಡ್‌‌‌ರೂಂನಲ್ಲಿದ್ದ ಪ್ರಿಯಕರನ ಕೊಂದ ಸಹೋದರರು! (Girl's kin kill boyfriend in a fit of rage | Bokaro | Virat Vidya | Jharkhand)
Bookmark and Share Feedback Print
 
ಮಧ್ಯರಾತ್ರಿ ತಂಗಿಯ ಬೆಡ್ ರೂಮಿನಲ್ಲಿ ಲಲ್ಲೆಗರೆಯುತ್ತಿದ್ದ ಪ್ರಿಯಕರನನ್ನು ಹುಡುಗಿಯ ಸಹೋದರರು ಮತ್ತು ಸಂಬಂಧಿಗಳು ಸೇರಿಕೊಂಡು ಮನಬಂದಂತೆ ಹೊಡೆದು ಕೊಂದು ಹಾಕಿದ ಘಟನೆಯೊಂದು ಜಾರ್ಖಂಡ್‌ನಿಂದ ವರದಿಯಾಗಿದೆ.

ಹುಡುಗಿಯ ಕಡೆಯವರಿಂದ ಹೊಡೆತ ತಿಂದು ಸಾವನ್ನಪ್ಪಿದ ಯುವಕನನ್ನು ಇಲ್ಲಿನ ಬೊಕಾರೋ ಸರಕಾರಿ ಕಾಲೇಜಿನಲ್ಲಿ ಓದುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬಿಹಾರ ಮೂಲದ ವಿರಾಟ್ ವೈದ್ಯ ಎಂದು ಗುರುತಿಸಲಾಗಿದೆ.

ವಾಣಿಜ್ಯ ವಿದ್ಯಾರ್ಥಿಯಾಗಿದ್ದ ವಿರಾಟ್ ವೈದ್ಯ, ತನ್ನದೇ ತರಗತಿಯ ನೂಪುರ್ ಎಂಬಾಕೆಯ ಜತೆ ಕಳೆದ ಕೆಲವು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದ. ಅದರಂತೆ ರಾತ್ರಿ ಹೊತ್ತು ಯಾರಿಗೂ ತಿಳಿಯದಂತೆ ಪ್ರಿಯತಮೆಯ ಮನೆಗೆ ಬಂದು ಹೋಗುತ್ತಿದ್ದ.

ಆದರೆ ಶನಿವಾರ ರಾತ್ರಿ ವಿಧಿಲಿಖಿತ ಬೇರೆಯಾಗಿತ್ತು. ಮನೆಯವರಲ್ಲದೆ ಬೇರೆ ಯಾರೋ ಇದ್ದಾರೆ ಎಂಬ ಸಂಶಯಕ್ಕೊಳಗಾದ ನೂಪುರ್ ಸಹೋದರರು ಹುಡುಕಾಟ ಆರಂಭಿಸಿದ್ದರು.

ತಂಗಿಯ ಬೆಡ್ ರೂಮಿನಲ್ಲಿ ವೈದ್ಯನನ್ನು ಕಂಡು ಕೆಂಡಾಮಂಡಲರಾದ ಮನೆಯವರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಹೊತ್ತಿನಲ್ಲಿ ನೂಪುರ್ ಮಾಡಿದ ಮನವಿಗಳಿಗೂ ಯಾವುದೇ ಬೆಲೆ ದೊರಕಿರಲಿಲ್ಲ.

ನೂಪುರ್‌ಳ ಒಬ್ಬ ಸಹೋದರ, ಇಬ್ಬರು ಸೋದರ ಸಂಬಂಧಿಗಳು ಮತ್ತು ಚಿಕ್ಕಪ್ಪ ಸೇರಿಕೊಂಡು ಈ ಹತ್ಯೆ ನಡೆಸಿದ್ದಾರೆ. ಆದರೆ ಆರೋಪಿಗಳು ನೀಡುವ ಹೇಳಿಕೆಯ ಪ್ರಕಾರ ಥಳಿಸಿದ್ದು ಹೌದು, ಆದರೆ ಕೊಂದಿಲ್ಲ. ಆತನನ್ನು ಮನೆಗೆ ಬಿಟ್ಟು ಬಂದಿದ್ದೇವೆ ಎಂದಿದ್ದಾರೆ.

ಯಾರಾದ್ರೂ ಹೀಗೆ ಮಾಡ್ತಿದ್ರು...
ಹೀಗೆಂದು ಹೇಳುತ್ತಿರುವುದು ನೂಪುರ್ ಸಹೋದರ ರಾಕೇಶ್. ಸ್ವತಃ ತಂಗಿಯ ಕೊಠಡಿಯಲ್ಲಿ ಯಾರೋ ಒಬ್ಬ ಅಪರಿಚಿತ ಬಂದು ಸೇರಿಕೊಂಡಿದ್ದಾನೆ ಎಂದರೆ ಈ ಜಗತ್ತಿನ ಪ್ರತಿಯೊಬ್ಬರೂ ಇದೇ ರೀತಿ ಪ್ರತಿಕ್ರಿಯಿಸುತ್ತಿದ್ದರು ಎಂದು ಆತ ಹೇಳಿದ್ದಾನೆ.

ವೈದ್ಯ ಮಧ್ಯರಾತ್ರಿ ಹೊತ್ತು ನನ್ನ ತಂಗಿಯ ರೂಮಿನಲ್ಲಿದ್ದ. ನಾವು ಇದನ್ನು ಆಕ್ಷೇಪಿಸಿದಾಗ, ನಮ್ಮೊಂದಿಗೆ ವಾಗ್ವಾದಕ್ಕಿಳಿದ. ಇದು ನಮ್ಮನ್ನು ಕೆರಳಿಸಿತು. ನಮ್ಮ ಮನೆಗೆ ಬಂದು ನಮ್ಮನ್ನೇ ಹೆದರಿಸಲು ನೋಡಿದ್ದನ್ನು ಕಂಡು ಆಕ್ರೋಶಗೊಂಡ ನಾವು ಥಳಿಸಿದೆವು. ಆದರೆ ಆತನನ್ನು ಕೊಂದು ಹಾಕುವ ಉದ್ದೇಶ ನಮಗಿರಲಿಲ್ಲ. ನಂತರ ಆತನಿಗೆ ನೀರು ಕುಡಿಸಿ, ಮನೆಗೆ ಬಿಟ್ಟು ಬಂದಿದ್ದೇವೆ. ಜತೆಗೆ ಮತ್ತೆ ನಮ್ಮ ತಂಗಿಯನ್ನು ಭೇಟಿ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದೆವು ಎಂದು ರಾಕೇಶ್ ವಿವರಣೆ ನೀಡಿದ್ದಾನೆ.

ಎಲ್ಲವನ್ನೂ ಕಳೆದುಕೊಂಡಿದ್ದೇನೆ...
ಕದ್ದುಮುಚ್ಚಿ ಮನೆಯಲ್ಲೇ ಪ್ರೀತಿಸುತ್ತಿದ್ದ ವಿಚಾರ ಬಹಿರಂಗವಾಗಿ ಜೋಡಿಯನ್ನು ಕಳೆದುಕೊಂಡಿರುವ ನೂಪುರ್ ಆರ್ತವಿದು. ನನ್ನ ಸಹೋದರರು ಮತ್ತು ಚಿಕ್ಕಪ್ಪನನ್ನು ಬಿಟ್ಟುಬಿಡಿ ಎಂದು ಪೊಲೀಸರಲ್ಲಿ ಇದೀಗ ಗೋಗರೆಯುತ್ತಿದ್ದಾಳೆ.

ನಾನು ವೈದ್ಯನೊಂದಿಗೆ ರೂಮಿನಲ್ಲಿದ್ದದ್ದು ನನ್ನದೇ ತಪ್ಪು. ಅವನಿಗೆ ಹೊಡೆಯಬೇಡಿ ಎಂದು ನಾನು ಸಾಕಷ್ಟು ಬೇಡಿಕೊಂಡರೂ, ಆ ಕ್ಷಣ ನನ್ನ ನಿಯಂತ್ರಣದಲ್ಲಿರಲಿಲ್ಲ. ಘಟನೆಗೆ ಪೂರ್ತಿಯಾಗಿ ನಾನೇ ಹೊಣೆಗಾರ್ತಿ. ನಾನು ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದೇನೆ ಎಂದಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ