ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೊಹ್ರಾಬುದ್ದೀನ್ ಹತ್ಯೆ; ಮೋದಿ ಸಚಿವರಿಗೆ ಸಿಬಿಐ ಸಮನ್ಸ್ (Sohrabuddin case | Narendra Modi | CBI | Amit Shah)
Bookmark and Share Feedback Print
 
ಲಷ್ಕರ್ ಇ ತೋಯ್ಬಾ ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಜರಾತ್‌ನ ನರೇಂದ್ರ ಮೋದಿ ಸರಕಾರದ ಗೃಹಸಚಿವ ಅಮಿತ್ ಶಾಹ್ ಅವರಿಗೆ ಕೇಂದ್ರೀಯ ತನಿಖಾ ದಳ ಸಮನ್ಸ್ ಜಾರಿಗೊಳಿಸಿದೆ.

ಇಂದು ಅಪರಾಹ್ನ ಒಂದು ಗಂಟೆಗೆ ಗಾಂಧಿನಗರದಲ್ಲಿ ಸಿಟ್ ಅಧಿಕಾರಿಗಳನ್ನು ಸಚಿವರು ಮುಖಾಮುಖಿಯಾಗಲಿದ್ದು, ಅವರ ವಿರುದ್ಧ ದೋಷಾರೋಪಣೆಗೆ ಸಾಕಷ್ಟು ಪುರಾವೆಗಳು ತನ್ನಲ್ಲಿವೆ ಎಂದು ಸಿಬಿಐ ಹೇಳಿಕೊಂಡಿದೆ.

ಅದೇ ಹೊತ್ತಿಗೆ ತಾನು ತನಿಖಾ ದಳಗಳಿಗೆ ಕಾನೂನು ಬದ್ಧವಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಗುಜರಾತ್ ಬಿಜೆಪಿ ಸರಕಾರ ಹೇಳಿಕೊಂಡಿದೆ.
PR

ರಾಜೀನಾಮೆ ಸಾಧ್ಯತೆ...
ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ ಸಚಿವರ ಪಾತ್ರದ ಕುರಿತು ಮಹತ್ವದ ಸಾಕ್ಷ್ಯಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಸಿಬಿಐ ಅವರನ್ನು ವಿಚಾರಣೆ ನಡೆಸಲಿರುವುದು ಅವಮಾನವೆಂದೇ ಪರಿಗಣಿಸಲಾಗುತ್ತಿದೆ.

ವಿಚಾರಣೆಯ ನಂತರ ಅಮಿತ್ ಯಾವುದೇ ಕ್ಷಣದಲ್ಲಿ ಬಂಧನಕ್ಕೊಳಗಾಗಬಹುದು. ಹಾಗಾಗಿ ಅಮಿತ್ ತನ್ನ ಗೃಹಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗಿದೆ.

ಅಗತ್ಯ ಬಿದ್ದರೆ ಸಚಿವರನ್ನು ಬಂಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅವರು ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಸಕ್ರಿಯ ಪಾತ್ರ ವಹಿಸಿರುವ ಬಗ್ಗೆ ನಮ್ಮಲ್ಲಿ ಸಾಕಷ್ಟು ದಾಖಲೆಗಳು ಇರುವುದರಿಂದ ಅವರ ಬಂಧನ ಅನಿರೀಕ್ಷಿತವಾಗದು ಎಂದು ಸಿಬಿಐ ಹೇಳಿಕೊಂಡಿದೆ.

ಎನ್‌ಕೌಂಟರ್ ಪ್ರಕರಣವನ್ನು ಸಿಬಿಐಗೆ ಸುಪ್ರೀಂ ಕೋರ್ಟ್ ವಹಿಸಿದ ಬಳಿಕ ಅಹಮದಾಬಾದ್ ಕ್ರೈಂ ಬ್ರಾಂಚ್ ಮುಖ್ಯಸ್ಥ ಅಭಯ್ ಚೂಡಾಸಮಾ ಅವರನ್ನು ಸಿಬಿಐ ಬಂಧಿಸಿದ್ದನ್ನು ಇದೀಗ ಸ್ಮರಿಸಬಹುದಾಗಿದೆ. ಅಭಯ್ ಭಯೋತ್ಪಾದನೆಯ ವಿರುದ್ಧದ ಹೋರಾಟದ ಹೆಸರಿನಲ್ಲಿ ಸುಲಿಗೆ ಕಾರ್ಯ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದ್ದು, ಜುಲೈ 26ರಂದು ಅವರ ವಿರುದ್ಧ ಸಿಬಿಐ ಆರೋಪಪಟ್ಟಿ ದಾಖಲಿಸಲಿದೆ.

ಅದಕ್ಕೂ ಮೊದಲು ಪ್ರಕರಣವನ್ನು ತನಿಖೆ ನಡೆಸುತ್ತಿದ್ದ ಸಿಐಡಿ, ಗುಜರಾತ್‌ನ ಐಪಿಎಸ್ ಅಧಿಕಾರಿಗಳಾದ ಡಿಜಿ ವಂಜಾರಾ, ರಾಜ್‌ಕುಮಾರ್ ಪಾಂಡಿಯನ್ ಮತ್ತು ರಾಜಸ್ತಾನದ ದಿನೇಶ್ ಎಂ.ಎನ್. ಎಂಬವರನ್ನು ಬಂಧಿಸಿತ್ತು.

ಸೊಹ್ರಾಬುದ್ದೀನ್ ಎನ್‌ಕೌಂಟರ್ ನಕಲಿಯಾಗಿತ್ತು ಮತ್ತು ಆತನ ಪತ್ನಿ ಕೌಸರ್ ಬೀಯನ್ನು ಗುಜರಾತ್ ಪೊಲೀಸರೇ ಕೊಂದು ಹಾಕಿದ್ದರು ಎಂದು ಸುಪ್ರೀಂ ಕೋರ್ಟಿನಲ್ಲಿ ಗುಜರಾತ್ ಅಪರಾಧ ವಿಭಾಗದ ಸಿಐಡಿ ಒಪ್ಪಿಕೊಂಡಿತ್ತು. ಒಟ್ಟಾರೆ ಈ ಸಂಬಂಧ ಇದುವರೆಗೆ ಗುಜರಾತ್‌ ಮತ್ತು ರಾಜಸ್ತಾನಗಳ 14 ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ.

ಗೃಹ ಸಚಿವರ ಪಾಲು...
2005ರ ನವೆಂಬರ್ 26ರಂದು ನಡೆದಿದ್ದ ಸೊಹ್ರಾಬುದ್ದೀನ್ ಎನ್‌ಕೌಂಟರ್ ಮತ್ತು ಕೌಸರ್ ಬೀ ಕಾಣೆಯಾದ ಸಂದರ್ಭಗಳಲ್ಲಿ ಪೊಲೀಸ್ ಅಧಿಕಾರಿಗಳಾದ ವಂಜಾರಾ ಮತ್ತು ಪಾಂಡಿಯನ್ ಅವರಿಗೆ ಗೃಹಸಚಿವ ಅಮಿತ್ ಶಾಹ್ ಹಲವಾರು ಕರೆ ಮಾಡಿರುವ ದಾಖಲೆಗಳನ್ನು ಇದೀಗ ಸಿಬಿಐ ಸಂಗ್ರಹಿಸಿದೆ.

ತುಳಸೀರಾಮ್ ಪ್ರಜಾಪತಿ ಎನ್‌ಕೌಂಟರ್ ಪ್ರಕರಣವನ್ನು ಇತ್ತೀಚೆಗಷ್ಟೇ ಕೈಗೆತ್ತಿಕೊಂಡಿದ್ದ ಸಿಐಡಿಗೂ ಇದೀಗ ಅಮಿತ್ ಶಾಹ್ ಮತ್ತು ವಂಜಾರಾ, ಪಾಂಡಿಯನ್ ಜತೆಗಿನ ಸಂಭಾಷಣೆ ದಾಖಲೆಗಳು ಲಭ್ಯವಾಗಿವೆ. ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಕಣ್ಣಾರೆ ನೋಡಿದ್ದ ಏಕೈಕ ವ್ಯಕ್ತಿ ಪ್ರಜಾಪತಿಯಾಗಿದ್ದರು. ಅವರನ್ನು 2006ರ ಡಿಸೆಂಬರ್ 28ರಂದು ಕೊಂದು ಹಾಕಲಾಗಿತ್ತು.

ಪ್ರಕರಣದಲ್ಲಿ ಸಚಿವರ ನಿಕಟವರ್ತಿ ಐಪಿಎಸ್ ಅಧಿಕಾರಿಗಳ ಹೆಸರು ಕೂಡ ಕೇಳಿ ಬಂದಿರುವುದರಿಂದ ಅವರು ಕೂಡ ಬಂಧನಕ್ಕೊಳಗಾಗುವ ಸಾಧ್ಯತೆಗಳಿವೆ.
ಸಂಬಂಧಿತ ಮಾಹಿತಿ ಹುಡುಕಿ