ತೈಲೋತ್ಪನ್ನಗಳ ಬೆಲೆ ಏರಿಕೆ ಕ್ರಮವನ್ನು ಸಮರ್ಥಸಿಕೊಂಡಿರುವ ಕೇಂದ್ರ ಸರ್ಕಾರ, ತೈಲ ಕಂಪನಿಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಕನಿಷ್ಟ ಪ್ರಮಾಣದಲ್ಲಿ ಮಾತ್ರ ಬೆಲೆ ಏರಿಸಿರುವುದಾಗಿ ಹೇಳಿಕೊಂಡಿದೆ.
ಮುಂಗಾರು ಅಧಿವೇಶದಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಮುರಳಿ ದೇವ್ರಾ ಮಾತನಾಡುತ್ತಾ, ಹಲವು ರಾಜ್ಯಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಶೇ.24ರಿಂದ ಶೇ.33ರಷ್ಟು ತೆರಿಗೆ ವಿಧಿಸುತ್ತಿದೆ. ಇನ್ನು ಕೆಲವು ರಾಜ್ಯಗಳು ಸೀಮೆಎಣ್ಣೆ ಮೇಲೆ ಶೇ.12.5ರಷ್ಟು ದುಬಾರಿ ತೆರಿಗೆ ಹಾಕುತ್ತಿವೆ ಎಂದು ಆಕ್ಷೇಪಿಸಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನಗಳ ಬೆಲೆ ತೀವ್ರ ಏರಿಲಿತವಾದ ಸಂದರ್ಭದಲ್ಲಿ ತಾನು ಮಧ್ಯ ಪ್ರವೇಶಿಸುವುದಾಗಿ ಸರ್ಕಾರ ಈ ಮುಂಚೆಯೇ ಸ್ಪಷ್ಟಪಡಿಸಿದೆ ಎಂದು ಅವರು ತಿಳಿಸಿದರು.
ಇದಕ್ಕೂ ಮುನ್ನ ಸಮಾಜವಾದಿ ಪಕ್ಷದ ಸದಸ್ಯರು ಮುಲಾಯಂ ಸಿಂಗ್ ಯಾದವ್ ನೇತೃತ್ವದಲ್ಲಿ ಹಾಗೂ ಆರ್ಜೆಡಿ ಸದಸ್ಯರು ಲಾಲು ಪ್ರಸಾದ್ ಮುಂದಾಳತ್ವದಲ್ಲಿ ಬೆಲೆ ಏರಿಕೆ ಕುರಿತ ಚರ್ಚೆಗೆ ಆಗ್ರಹಿಸಿದರು.
ಸರ್ಕಾರದ ಧೋರಣೆಯೇ ವಿಚಿತ್ರವಾಗಿ ಕಾಣುತ್ತಿದ್ದು, ಬೆಲೆ ಏರಿಕೆ ಕುರಿತ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡುವುದಕ್ಕೆ ಸರ್ಕಾರಕ್ಕೆ ಮನಸ್ಸೇ ಇಲ್ಲ ಎಂದು ಜೆಡಿಯು ಮುಖ್ಯಸ್ಥ ಶರದ್ ಯಾದವ್ ಕೂಡಾ ಇದೇ ವೇಳೆ ಆರೋಪಿಸಿದರು.