ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಂತ್ರ-ಮಂತ್ರಕ್ಕೆ ಕಿವಿಕೊಟ್ಟು ಮಗಳನ್ನೇ ಬಲಿ ಕೊಟ್ಟರು..! (sacrifices daughter | Uttar Pradesh | godman | Kanni)
Bookmark and Share Feedback Print
 
ಜಗತ್ತು ವೈಜ್ಞಾನಿಕತೆಯ ಬಲದೊಂದಿಗೆ ಅತ್ಯಾಧುನಿಕತೆಯ ಸೋಗಿನಿಂದ ಮೆರುಗು ಪಡೆದುಕೊಂಡು ಮೂಢನಂಬಿಕೆಗಳಿಂದ ದೂರವಾಗುತ್ತಿದೆ ಎಂದು ಒಂದು ಕಡೆ ಅಂದುಕೊಳ್ಳುತ್ತಿರುವಾಗಲೇ ಇಂತಹ ಪ್ರಕರಣಗಳು ಮನಸ್ಸಿನಲ್ಲಿ ಸಂಶಯದ ಬೀಜಗಳನ್ನು ಬಿತ್ತುತ್ತವೆ. ಇದೀಗ ವರದಿಯಾಗಿರುವುದು ಹಣದ ಆಸೆಗಾಗಿ ಸ್ವತಃ ಹೆತ್ತವರೇ ತಮ್ಮ ಪುಟ್ಟ ಮಗಳನ್ನು ಬಲಿ ಕೊಟ್ಟಿರುವ ಪ್ರಕರಣ.

ಬಡತನದಿಂದ ಬೇಸತ್ತಿದ್ದ ದಂಪತಿಯನ್ನು ಸಂಪರ್ಕಿಸಿದ್ದ ಸ್ವಯಂಘೋಷಿತ ಮಂತ್ರವಾದಿಯೊಬ್ಬ, ತಮ್ಮ ಮಗಳನ್ನು ಬಲಿ ಕೊಟ್ಟಲ್ಲಿ ನಿಮ್ಮ ಆಯುರೈಶ್ವರ್ಯ ವೃದ್ಧಿಯಾಗುತ್ತದೆ ಎಂದು ಭರವಸೆ ನೀಡಿದ್ದ. ಇದಕ್ಕೆ ತಲೆದೂಗಿದ್ದ ಹೆತ್ತವರು ಕಣ್ಮುಚ್ಚಿ ಮಗಳನ್ನು ಕೊಂದು ಹಾಕಿದ್ದಾರೆ.

ಇದು ನಡೆದಿರುವುದು ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯ ದಹೇಲಿಕುಶೇಪಾ ಗ್ರಾಮದಲ್ಲಿ. ರಾಜಧಾನಿ ಲಕ್ನೋದಿಂದ 80 ಕಿಲೋ ಮೀಟರ್ ದೂರದಲ್ಲಿರುವ ಈ ಗ್ರಾಮದ ಶ್ರೀಕೃಷ್ಣ ಮತ್ತು ರಮಾದೇವಿ ಎಂಬ ದಂಪತಿಯೇ ನಾಲ್ಕರ ಹರೆಯದ ಮಗಳು ಕನ್ನಿ ಎಂಬಾಕೆಯನ್ನು ಬಲಿಕೊಟ್ಟವರು.

ಶಿವಕುಮಾರ್ ಎಂಬ ಮಂತ್ರವಾದಿ ನೀಡಿದ ನಿರ್ದೇಶನದಂತೆ ಸ್ವತಃ ತಾಯಿ-ತಂದೆಯೇ ತಮ್ಮ ಮಗಳನ್ನು ಕೈಯಾರೆ ಕೊಂದು ಹಾಕಿದ್ದಾರೆ. ವರದಿಗಳ ಪ್ರಕಾರ ಅವರು ಮೊದಲು ಹರಿತವಾದ ಆಯುಧದಿಂದ ಮಗಳು ಕನ್ನಿಯನ್ನು ಕೊಂದು, ನಂತರ ಅಲ್ಲೇ ಸುಟ್ಟು ಹಾಕಲಾಗಿದೆ.

ಅರೆಬೆಂದ ಪುಟಾಣಿ ಶವವನ್ನು ಪೊಲೀಸರು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದೊಂದು ಮಾನವ ಬಲಿ ಪ್ರಸಂಗವೆಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಸ್ಥಳದಲ್ಲಿ ಹೂ, ಕುಂಕುಮದ ಪ್ಯಾಕೇಟುಗಳು, ಅಗರಬತ್ತಿಗಳು ಮತ್ತು ಇತರ ಪೂಜಾ ಸಾಮಗ್ರಿಗಳು ಮಗುವಿನ ಶವದ ಸುತ್ತ ಪತ್ತೆಯಾಗಿವೆ. ಅದನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಆರೋಪಿಗಳಾದ ಶ್ರೀಕೃಷ್ಣ, ರಮಾದೇವಿ ಮತ್ತು ಶಿವಕುಮಾರ್ ತಪ್ಪಿಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಮಂತ್ರವಾದಿ ಶಿವಕುಮಾರ್ ಈ ದಂಪತಿಯ ಮನೆಗೆ ಹೋದ ನಂತರ ಕನ್ನಿ ವೇದನೆಯಿಂದ ನರಳುತ್ತಿದ್ದುದನ್ನು ಕೇಳಿದ್ದ ಅಕ್ಕ-ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಮನೆಗೆ ದಾಳಿ ನಡೆಸಿದಾಗ, ಆರೋಪಿಗಳು ತಪ್ಪಿಸಿಕೊಂಡಿದ್ದರು.

ಸ್ಥಳೀಯರ ಪ್ರಕಾರ ಮಾಂತ್ರಿಕ ಇತರ ಕುಟುಂಬಗಳಿಗೂ ಇದೇ ರೀತಿಯ ಸಲಹೆ ನೀಡಿದ್ದಾನೆ. ನಿಮ್ಮ ಮಕ್ಕಳನ್ನು ಬಲಿ ಕೊಟ್ಟಲ್ಲಿ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದ್ದ.
ಸಂಬಂಧಿತ ಮಾಹಿತಿ ಹುಡುಕಿ