10 ದಿನಗಳ ಕಾಲ ನಡೆಯುವ ಗಣೇಶೋತ್ಸವಕ್ಕೆ ಭಂಗ ತರುವ ಉದ್ದೇಶದಿಂದ ಮುಂಬೈಗೆ ಇಬ್ಬರು ವಿದೇಶಿ ಶಂಕಿತ ಭಯೋತ್ಪಾದಕರು ಪ್ರವೇಶಿಸಿದ್ದಾರೆ ಎಂದು ಮುಂಬೈ ಪೊಲೀಸರು ಎಚ್ಚರಿಕೆ ನೀಡಿದ್ದು, ಚೌತಿಯ ಸಂದರ್ಭದಲ್ಲಿ ಸಂಭಾವ್ಯ ದಾಳಿಗಳು ನಡೆಯುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. ಹೀಗಾಗಿ ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಬಾಂಗ್ಲಾದೇಶ ಮತ್ತು ಪಾಕಿಸ್ತಾನಿ ಪ್ರಜೆಗಳಾಗಿರುವ ಇಬ್ಬರು ಮುಂಬೈಗೆ ಕೆಲವು ಸಮಯದ ಹಿಂದೆಯೇ ನುಸುಳಿದ್ದಾರೆ ಎಂದು ಬೇಹುಗಾರಿಕಾ ದಳಗಳು ಪೊಲೀಸ್ ಇಲಾಖೆ ಮತ್ತು ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದ್ದಾರೆ ಎಂದು ಮುಂಬೈ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಹಿಮಾಂಶು ರಾಯ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
PR
ಇವರನ್ನು ಖಲೀಮುದ್ದೀನ್ ಖಾನ್ ಆಲಿಯಾಸ್ ರಾಮೇಶ್ವರ್ ಪಂಡಿತ್ (28) ಮತ್ತು ಹಫೀಜ್ ಶರೀಫ್ (25) ಎಂಬ ಈ ಇಬ್ಬರು ಶಂಕಿತ ಭಯೋತ್ಪಾದಕರ ರೇಖಾ ಚಿತ್ರಗಳನ್ನು ಕೂಡ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಪ್ರಸಕ್ತ ನಮಗೆ ಬಂದಿರುವ ಬೇಹುಗಾರಿಕಾ ಮಾಹಿತಿಗಳ ಪ್ರಕಾರ ಹಬ್ಬದ ಸಂದರ್ಭದಲ್ಲಿ ಅವರು ಅತಿ ಹೆಚ್ಚು ಜನ ಸೇರುವ ಜಾಗಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಯೋಜನೆ ರೂಪಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರಾದರೂ, ಹೆಚ್ಚಿನ ಮಾಹಿತಿಗಳನ್ನು ನೀಡಲು ನಿರಾಕರಿಸಿದ್ದಾರೆ.
ಭಯೋತ್ಪಾದಕರ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ಧಾರ್ಮಿಕ ಸ್ಥಳಗಳಿಗೆ ಗರಿಷ್ಠ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ.
ಇಬ್ಬರಲ್ಲಿ ಒಬ್ಬನಾಗಿರುವ ಪಾಕಿಸ್ತಾನದ ಖಾನ್ 'ಲಷ್ಕರ್ ಇ ತೋಯ್ಬಾ' ಭಯೋತ್ಪಾದನಾ ಸಂಘಟನೆಯ ಜತೆ ನಂಟು ಹೊಂದಿದ್ದರೆ, ಎರಡನೇಯವನಾದ ಬಾಂಗ್ಲಾದೇಶಿಗ 'ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ' (ಹುಜಿ) ಜತೆ ಸಂಬಂಧ ಹೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮುಂಬೈಗೆ ನುಗ್ಗಿರುವ ಈ ಇಬ್ಬರನ್ನು ಪತ್ತೆ ಹಚ್ಚಲು ನಾವು ಶ್ರಮಿಸುತ್ತಿದ್ದೇವೆ. ಈ ಸಂಬಂಧ ಈಗಾಗಲೇ ಹಲವು ತಂಡಗಳನ್ನು ನಾವು ರಚಿಸಿದ್ದೇವೆ. ಸಾರ್ವಜನಿಕರಿಗೆ ಈ ಕುರಿತು ಯಾವುದೇ ಮಾಹಿತಿಗಳು ದೊರೆತದಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ಸಹಾಯವಾಣಿಗೆ ತಿಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಭಯೋತ್ಪಾದಕರು ಬಂದಿರುವುದು ಮುಂಬೈಗೆ ಎಂದಾಗಿದ್ದರೂ, ಅವರು ದೇಶದ ಇತರ ರಾಜ್ಯಗಳ ಪ್ರಮುಖ ನಗರಗಳ ಮೇಲೆ ಕಣ್ಣಿಟ್ಟಿರುವ ಸಾಧ್ಯತೆಗಳಿವೆ. ಹಾಗಾಗಿ ಇತರ ಎಲ್ಲಾ ರಾಜ್ಯಗಳಿಗೂ ಪ್ರಕರಣದ ಕುರಿತು ಕಟ್ಟೆಚ್ಚರ ರವಾನಿಸಲಾಗಿದೆ.