ಅಯೋಧ್ಯೆಯ ಆಕೆಯಲ್ಲೂ ಕಳವಳಗಳಿವೆ, ಆದರೆ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಕಟ್ಟಾ ಮುಸ್ಲಿಂ, ಆದರೆ ಧರ್ಮಗಳ ನಡುವೆ ಸಾಮರಸ್ಯ ಮೆರೆಯಬೇಕೆನ್ನುವುದಕ್ಕೆ ಮೊದಲ ಆದ್ಯತೆ. ಅದೇ ನಿಟ್ಟಿನಲ್ಲಿ ಇದೀಗ 'ರಾಮಾಯಣ'ವನ್ನು ಉರ್ದುವಿಗೆ ಭಾಷಾಂತರಿಸಿ ನಿರುಮ್ಮಳರಾಗಿದ್ದಾರೆ.
ಈ ಮಹಾನ್ ಮುಸ್ಲಿಂ ವಿದ್ವಾಂಸೆಯ ಹೆಸರು ನಜ್ನೀನ್. ನೇಕಾರರ ಅನಕ್ಷರಸ್ಥ ಕುಟುಂಬದಿಂದ ಬಂದಿರುವ 22ರ ಯುವತಿ ಕೋಮು ಸೌಹಾರ್ದತೆಗೆ ಅತ್ಯುತ್ತಮ ಉದಾಹರಣೆಯಾಗಿ ತುಳಸೀದಾಸರ 'ರಾಮಚರಿತಮಾನಸ' ಗ್ರಂಥವನ್ನು ಉರ್ದುವಿಗೆ ಭಾಷಾಂತರಿಸಿ, ಮುಸ್ಲಿಂ ಧರ್ಮೀಯರಿಗೂ ಓದುವಂತೆ ಮಾಡಿದ್ದಾರೆ.
PR
ಈ ಸಂದರ್ಭದಲ್ಲಿ ಅಯೋಧ್ಯೆ ವಿವಾದದ ಕುರಿತೂ ಅವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ತೀರ್ಪು ಏನೇ ಆಗಿದ್ದರೂ, ಅಯೋಧ್ಯೆಯೇ ಶ್ರೀರಾಮನ ಜನ್ಮಸ್ಥಳ ಎಂಬುದನ್ನು ಯಾರೊಬ್ಬರೂ ನಿರಾಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದ ಪ್ರತಿಭಾವಂತ ಹಳೆ ವಿದ್ಯಾರ್ಥಿನಿಯಾಗಿರುವ ನಜ್ನೀನ್ ಈಗಾಗಲೇ ಸುಂದರಕಾಂಡದವರೆಗಿನ ಅನುವಾದವನ್ನು ಬರೆದು ಮುಗಿಸಿದ್ದಾರೆ. ಮುಂದಿನ ತಿಂಗಳಾಂತ್ಯದಲ್ಲಿ ನನ್ನ ಸಂಪೂರ್ಣ ಕೆಲಸವನ್ನು ಮುಗಿಸುವ ಭರವಸೆಯಿದೆ ಎನ್ನುತ್ತಾರೆ.
ದುರ್ಗಾ ಚಾಲಿಸ ಮತ್ತು ಹನುಮಾನ್ ಚಾಲಿಸ ಗ್ರಂಥಗಳನ್ನು ನಜ್ನೀನ್ ಈ ಹಿಂದೆಯೇ ಉರ್ದುವಿಗೆ ಭಾಷಾಂತರಗೊಳಿಸಿದ್ದರು.
ನನ್ನ ಪ್ರಕಾರ ಅಂತಿಮ ತೀರ್ಪು ಮುಸ್ಲಿಮ ಪರವಾಗಿ ಬಂದರೂ, ಅವರು ಸ್ವತಃ ಮುಂದೆ ಬಂದು ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಿ ಕೊಡಬೇಕು. ವಿವಾದಿತ ಸ್ಥಳದಲ್ಲಿ ಮಸೀದಿ ಕಟ್ಟುವುದಕ್ಕೆ ಇಸ್ಲಾಂ ಅನುಮತಿ ನೀಡುವುದಿಲ್ಲ. ರಾಮ ಎಂದರೆ ಕೇವಲ ಹಿಂದೂಗಳಿಗಷ್ಟೇ ಸೇರಿದವನಲ್ಲ. ಎಲ್ಲಾ ಧರ್ಮ-ಸಮುದಾಯಗಳ ಜನತೆಗೆ ಆತನ ವ್ಯಕ್ತಿತ್ವ ಸ್ಫೂರ್ತಿಯ ಮೂಲ ಎಂದು ಲೇಖಕಿ ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಗಳ ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳನ್ನು ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳಿಗೆ ಮುಘಲ್ ಚಕ್ರವರ್ತಿ ಅಕ್ಬರ್ ಆಳ್ವಿಕೆಯ ಅವಧಿಯಲ್ಲಿ ಭಾಷಾಂತರಿಸಿದ ಅಬ್ದುಲ್ ಖಾದಿರ್ ಅವರಂತಹ ಲೇಖಕರು ಮತ್ತು ವಿದ್ವಾಂಸರು ನಜ್ನೀನ್ ಅವರಿಗೆ ಸ್ಫೂರ್ತಿಯಂತೆ.