ಪ್ರಿಯದರ್ಶಿನಿ ಅತ್ಯಾಚಾರ-ಕೊಲೆ; ಗಲ್ಲು ಶಿಕ್ಷೆ ಜೀವಾವಧಿಗೆ
ನವದೆಹಲಿ, ಬುಧವಾರ, 6 ಅಕ್ಟೋಬರ್ 2010( 15:41 IST )
ಪ್ರಿಯದರ್ಶಿನಿ ಮಟ್ಟೂ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂತೋಷ್ ಕುಮಾರ್ ಸಿಂಗ್ ಎಂಬಾತ ದೋಷಿ ಎಂಬ ತೀರ್ಪನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್, ಕೆಲವು ವಿಚಾರಗಳು ಆತನ ಪರವಾಗಿರುವುದನ್ನು ಪರಿಗಣಿಸಿ ಮರಣದಂಡನೆ ಶಿಕ್ಷೆಯನ್ನು ಜೀವಾವಧಿಗೆ ಇಳಿಕೆಗೊಳಿಸಿದೆ.
ಆತ ಅಪರಾಧಿಯೆನ್ನುವುದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ನ್ಯಾಯಮೂರ್ತಿಗಳಾದ ಎಚ್.ಎಸ್. ಬೇಡಿ ಮತ್ತು ಸಿ.ಕೆ. ಪ್ರಸಾದ್ ಅವರನ್ನೊಳಗೊಂಡ ಪೀಠವು ತನ್ನ ತೀರ್ಪಿನಲ್ಲಿ ಹೇಳಿದೆ.
ಅದೇ ಹೊತ್ತಿಗೆ ಕೆಲವು ವಿಚಾರಗಳು ಸಂತೋಷ್ ಪರವಾಗಿರುವುದರಿಂದ, ಆತನಿಗೆ ಹೈಕೋರ್ಟ್ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತನೆಗೊಳಿಸುತ್ತೇವೆ ಎಂದು ಪೀಠವು ತಿಳಿಸಿದೆ.
ವಿಚಾರಣಾ ನ್ಯಾಯಾಲಯವು ನಿರ್ದೋಷಿ ಎಂದು ತೀರ್ಪು ನೀಡಿರುವುದನ್ನು ತಳ್ಳಿ ಹಾಕಿ ದೆಹಲಿ ಹೈಕೋರ್ಟ್ ತಪ್ಪಿತಸ್ಥ ಎಂದು ಹೇಳಿದ್ದಲ್ಲದೆ, ಮರಣದಂಡನೆ ಶಿಕ್ಷೆ ವಿಧಿಸಿರುವುದನ್ನು ಮಾಜಿ ಹಿರಿಯ ಐಪಿಎಸ್ ಅಧಿಕಾರಿಯ ಪುತ್ರನಾಗಿರುವ ಸಿಂಗ್ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದ.
ಸಿಂಗ್ ಮನವಿಯನ್ನು ಸ್ವೀಕರಿಸಿದ್ದ ಅಪೆಕ್ಸ್ ನ್ಯಾಯಾಲಯವು ಪ್ರಕರಣವನ್ನು ವಿಚಾರಣೆ ನಡೆಸಿ ಜುಲೈ 29ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
1996ರ ಜನವರಿಯಲ್ಲಿ ದೆಹಲಿ ವಿಶ್ವವಿದ್ಯಾಲಯದ ಮೂರನೇ ವರ್ಷದ ಕಾನೂನು ವಿದ್ಯಾರ್ಥಿನಿ ಪ್ರಿಯದರ್ಶಿನಿಯನ್ನು ಅದೇ ಯುನಿವರ್ಸಿಟಿಯ ಕಾನೂನು ವಿದ್ಯಾರ್ಥಿಯಾಗಿದ್ದ ಸಿಂಗ್ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ.
ಪ್ರಕರಣದ ವಿಚಾರಣೆ ನಡೆಸಿದ್ದ ಕೆಳಗಿನ ನ್ಯಾಯಾಲಯವು 1999ರ ಡಿಸೆಂಬರ್ 3ರಂದು ದೋಷಮುಕ್ತಗೊಳಿಸಿತ್ತು. ಆದರೆ ಇದನ್ನು ಒಪ್ಪಿಕೊಳ್ಳಲು ನಿರಾಕರಿಸಿದ ದೆಹಲಿ ಹೈಕೋರ್ಟ್, 2006ರ ಅಕ್ಟೋಬರ್ 27ರಂದು ಸಿಂಗ್ನನ್ನು ಅಪರಾಧಿ ಎಂದು ಘೋಷಿಸಿ ಮರಣದಂಡನೆ ವಿಧಿಸಿತ್ತು.
ಸಿಂಗ್ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪವನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್, ಈ ಸಂಬಂಧ ಪುರಾವೆಗಳನ್ನು ಸಮರ್ಥ ರೀತಿಯಲ್ಲಿ ಪರಿಶೀಲನೆ ನಡೆಸಿತ್ತು ಎಂದು ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಹೇಳಿತ್ತು.