ಉಗ್ರಗಾಮಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಆರೋಪ ಹೊತ್ತಿರುವ ನಿಷೇಧಿತ ಸಂಘಟನೆ 'ಸಿಮಿ'ಯ ಜತೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಹೋಲಿಕೆ ಮಾಡಿದ್ದ ರಾಹುಲ್ ಗಾಂಧಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಲೋಕ ಜನಶಕ್ತಿ ಪಕ್ಷದ ವರಿಷ್ಠ ರಾಮ್ ವಿಲಾಸ್ ಪಾಸ್ವಾನ್, ಆರೆಸ್ಸೆಸ್ ಮೇಲೂ ನಿಷೇಧ ಹೇರುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸುತ್ತಿರುವುದು ಹೌದೇ ಆಗಿದ್ದರೆ ಯುಪಿಎ ಸರಕಾರವು ಸಂಘ ಪರಿವಾರದ ಸಂಘಟನೆಗಳ ಮೇಲೆ ನಿಷೇಧ ಹೇರಬೇಕು ಎಂದರು.
ಮಧ್ಯಪ್ರದೇಶ ಪ್ರವಾಸ ಸಂದರ್ಭದಲ್ಲಿ ರಾಹುಲ್ ಹೇಳಿದ ಮಾತಿದು. ಇದನ್ನು ಕೇಂದ್ರವು ಗಂಭೀರವಾಗಿ ಪರಿಗಣಿಸದೇ ಇದ್ದರೆ, ರಾಹುಲ್ ಅಭಿಪ್ರಾಯಗಳನ್ನು ಕಾಂಗ್ರೆಸ್ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಮಾತನಾಡಿದರೆ ಆ ಕುರಿತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರೂ ಗಮನ ಕೊಡುತ್ತಾರೆ. ಅವರ ಮಾತುಗಳು, ಟೀಕೆಗಳು ಅಥವಾ ಸಲಹೆಗಳನ್ನು ಸ್ವೀಕರಿಸುತ್ತಾರೆ ಎಂದು ಹೇಳುವುದನ್ನು ಕೇಳಿದ್ದೇನೆ. ಹಾಗಾಗಿ ಇದನ್ನು ಕೂಡ ಗಂಭೀರವಾಗಿ ಪರಿಗಣಿಸಬೇಕು ಎಂದು ಪಾಸ್ವಾನ್ ಒತ್ತಾಯಿಸಿದರು.
ರಾಹುಲ್ ಅವರಿಂದ ಇಂತಹ ಸಂಕೇತ ಲಭಿಸಿರುವ ಹೊರತಾಗಿಯೂ ಮಹಾತ್ಮಾ ಗಾಂಧೀಜಿಯವರ ಹಂತಕರ ಜತೆ ಸಂಬಂಧ ಹೊಂದಿರುವ ಸಂಘಟನೆಗಳ ಮೇಲೆ ನಿಷೇಧ ಹೇರಲು ಕೇಂದ್ರ ಸರಕಾರ ಮುಂದೆ ಬರದಿದ್ದರೆ ಸಮಾಜಕ್ಕೆ ಅದು ಯಾವ ಸಂದೇಶವನ್ನು ರವಾನಿಸಿದಂತಾಗುತ್ತದೆ ಎಂದೂ ಪ್ರಶ್ನಿಸಿದರು.
ಸದಾ ಮುಸ್ಲಿಮರ ಓಲೈಕೆ ಮಾಡುತ್ತಾ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಪಾಸ್ವಾನ್ ಇದೇ ಸಂದರ್ಭದಲ್ಲಿ ಅಯೋಧ್ಯೆ ತೀರ್ಪನ್ನು ಕೂಡ ರಾಹುಲ್ ಹೇಳಿಕೆಗೆ ಥಳಕು ಹಾಕಿದ್ದಾರೆ.
ರಾಹುಲ್ ಹೇಳಿಕೆಯ ನಂತರವೂ ಕೇಂದ್ರವು ಸಂಘ ಪರಿವಾರ ಸಂಘಟನೆಗಳ ನಿಷೇಧ ವಿಚಾರವನ್ನು ಗಂಭೀರವಾಗಿ ಪರಿಗಣಿಸದೇ ಇದ್ದರೆ, ಇದು ಅಯೋಧ್ಯೆ ತೀರ್ಪಿನಿಂದಾದ ಹಾನಿಯನ್ನು ದುರಸ್ತಿಗೊಳಿಸಲು ಕಾಂಗ್ರೆಸ್ ಕೈಗೊಂಡಿರುವ ತಂತ್ರ ಎಂಬ ಸಂದೇಶ ಜನತೆಗೆ ಹೋಗುತ್ತದೆ ಎಂದರು.
ಅಲ್ಪಸಂಖ್ಯಾತರ ರಕ್ಷಣೆ ನಿಟ್ಟಿನಲ್ಲಿ ತಾನು ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳಗಳ ಮೇಲೆ ನಿಷೇಧ ಹೇರಬೇಕೆಂದು ಹೇಳುತ್ತಾ ಬಂದಿದ್ದೇನೆ. ಭಯೋತ್ಪಾದಕರ ಜತೆ ಸಂಬಂಧ ಹೊಂದಿದೆ ಎಂದು ಆರೋಪ ಹೊರಿಸಿ ಸಿಮಿಯನ್ನು ನಿಷೇಧಿಸಿರುವಾಗ ತೀವ್ರವಾದವನ್ನು ಪಸರಿಸುತ್ತಿರುವ ಬಲಪಂಥೀಯ ಸಂಘಟನೆಗಳ ಮೇಲೆ ನಿಷೇಧ ಯಾಕೆ ಹೇರಬಾರದು ಎಂದೂ ಪಾಸ್ವಾನ್ ಪ್ರಶ್ನಿಸಿದ್ದಾರೆ.