2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಯು ಅದೇ ವರ್ಷದ ರಂಜನ್ ಸಂದರ್ಭದಲ್ಲಿ ನಡೆಸಬೇಕೆಂದು ಯೋಜನೆ ರೂಪಿಸಲಾಗಿತ್ತು ಎಂದು ಲಷ್ಕರ್ ಇ ತೋಯ್ಬಾ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಸಯ್ಯದ್ ಗಿಲಾನಿ ತನಿಖಾ ದಳಗಳಿಗೆ ತಿಳಿಸಿರುವುದು ಬೆಳಕಿಗೆ ಬಂದಿದೆ.
PTI
ಆದರೆ ಈ ಯೋಜನೆ ವಿಫಲವಾಗಿತ್ತು. ಅದಕ್ಕೆ ಕಾರಣ ಭಯೋತ್ಪಾದಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿದ್ದು ಎಂದು ಪಾಕಿಸ್ತಾನ ಮೂಲದ ಅಮೆರಿಕಾ ಭಯೋತ್ಪಾದಕ ಕೆಲ ತಿಂಗಳ ಹಿಂದಷ್ಟೇ ಭಾರತೀಯ ತನಿಖಾ ದಳದ ಅಧಿಕಾರಿಗಳಿಗೆ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾನೆ.
2008ರ ನವೆಂಬರ್ 26ರಿಂದ 29ರವರೆಗೆ ಮುಂಬೈಯ ಹಲವೆಡೆ ಯದ್ವಾತದ್ವಾ ದಾಳಿಗಳನ್ನು ನಡೆಸಿದ್ದ ಪಾಕಿಸ್ತಾನದ 10 ಭಯೋತ್ಪಾದಕರು 166 ಅಮಾಯಕರನ್ನು ಕೊಂದು ಹಾಕಿದ್ದರು. ಈ ದಾಳಿಕೋರರಲ್ಲಿ ಜೀವಂತವಾಗಿ ಸೆರೆ ಸಿಕ್ಕಿದ್ದು ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಮಾತ್ರ.
2008ರ ರಂಜಾನ್ ಸಂದರ್ಭದಲ್ಲಿ ಅಂದರೆ ಸೆಪ್ಟೆಂಬರ್ 1ರಿಂದ 30ರೊಳಗೆ ದಾಳಿ ನಡೆಸಲು ಲಷ್ಕರ್ ಇ ತೋಯ್ಬಾ ಸಿದ್ಧತೆ ನಡೆಸಿತ್ತು. ಆ ಮೂಲಕ ಮುಸ್ಲಿಮರನ್ನು ಕೆರಳಿಸುವುದು ಉಗ್ರರ ಉದ್ದೇಶವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತಿದೆ.
ಅಲ್ಲದೆ ದೆಹಲಿಯ 'ರಕ್ಷಾ ಭವನ'ದ ಮೇಲೆ ನಡೆಸಲು ಉದ್ದೇಶಿಸಲಾಗಿದ್ದ ದಾಳಿಯೂ ವಿಫಲವಾಗಿತ್ತು. ಇದಕ್ಕೆ ಕಾರಣ ಭಾರತ ಸರಕಾರವು ವೀಸಾ ನಿರಾಕರಿಸಿದ್ದು. ಈ ಯೋಜನೆಯ ಹೊಣೆ ಹೊತ್ತಿದ್ದವನಿಗೆ ಭಾರತಕ್ಕೆ ಹೋಗಲು ಅಸಾಧ್ಯವಾದುದರಿಂದ ವಿಧ್ವಂಸಕ ಕೃತ್ಯ ನಡೆಸಲು ಸಾಧ್ಯವಾಗಿರಲಿಲ್ಲ.
ಇಂತಹ ಹತ್ತು ಹಲವು ಮಾಹಿತಿಗಳನ್ನೊಳಗೊಂಡ ರಾಷ್ಟ್ರೀಯ ತನಿಖಾ ದಳದ ವರದಿಯ ಪ್ರಕಾರ ಇದನ್ನೆಲ್ಲ ಬಾಯ್ಬಿಟ್ಟಿರುವ ಹೆಡ್ಲಿ ಪಾಕಿಸ್ತಾನ ಸರಕಾರ ಮತ್ತು ಭಯೋತ್ಪಾದನಾ ಸಂಘಟನೆಗಳ ಜತೆ ನಿಕಟ ಸಂಬಂಧ ಹೊಂದಿದ್ದ.
ಮುಂಬೈ ದಾಳಿಕೋರರಿಗೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ನೆರವು ನೀಡಿರುವುದು, ಹೆಡ್ಲಿಯ ತಂದೆ ನಿಧನರಾದ ಸಂದರ್ಭದಲ್ಲಿ ಆತನ ಮನೆಗೆ 2008ರಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿ ಭೇಟಿ ನೀಡಿರುವುದನ್ನು ಕೂಡ ಹೆಡ್ಲಿ ತಿಳಿಸಿದ್ದಾನೆ.
ಐಎಸ್ಐ ಉದ್ದೇಶ ಸ್ಪಷ್ಟವಾಗಿತ್ತು. ಪಾಕಿಸ್ತಾನದಲ್ಲಿರುವ ಹಿಂಸಾಚಾರಗಳು ಭಾರತಕ್ಕೆ ರವಾನೆಯಾಗಬೇಕು, ಇಲ್ಲಿ ಅಶಾಂತಿಯುತ ವಾತಾವರಣ ನಿರ್ಮಾಣವಾಗಬೇಕು ಎನ್ನುವುದು ಅವರ ಬಯಕೆಯಾಗಿತ್ತು.