ಕಳ್ಳರು, ಸುಳ್ಳರು, ಲಫಂಗರು, ನಿರಪರಾಧಿಗಳು...ಹೀಗೆ ಪ್ರತಿಯೊಬ್ಬರು ನ್ಯಾಯದ ಬಾಗಿಲು ತಟ್ಟುವ ಸರ್ವೋಚ್ಚನ್ಯಾಯಾಲಯದಲ್ಲಿಯೇ ಕಳೆದ ಕೆಲವು ದಿನಗಳಿಂದ ಕಳವು ನಡೆಯುತ್ತಿರುವ ಪ್ರಸಂಗ ಬಹಿರಂಗವಾಗಿದೆ. ಅಷ್ಟೊಂದು ಭದ್ರತೆ, ಸಿಸಿ ಟಿವಿ ಇದ್ದರೂ ಇದೇನಪ್ಪಾ ಕಥೆ ಅಂತ ಹುಬ್ಬೇರಿಸಬೇಡಿ! ಇದು ಸತ್ಯ.
ಇತ್ತೀಚೆಗಿನ ಕೆಲವು ದಿನಗಳಲ್ಲಿ ಸುಪ್ರೀಂಕೋರ್ಟ್ ಆವರಣದೊಳಗೆ ಎರಡು ಕಳವು ಪ್ರಕರಣ ನಡೆದಿದೆ. ಸುಪ್ರೀಂಕೋರ್ಟ್ನ ಬ್ಲಾಕ್ ನಂ.4ರಲ್ಲಿ ಅಳವಡಿಸಿದ್ದ ವಾಟರ್ ಕೂಲರ್ ಅನ್ನೇ ಅಪರಿಚಿತ ವ್ಯಕ್ತಿಗಳು ಲಪಟಾಯಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಕೋರ್ಟ್ನ ಸಹಾಯಕ ರಿಜಿಸ್ಟ್ರಾರ್ (ಎಜಿ) ಆರ್.ಎಲ್.ಯಾದವ್ ಅವರು ಕಳೆದ ವಾರ ತಿಲಕ್ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ದೂರನ್ನು ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದಾರೆ.
ಮತ್ತೊಂದು ಪ್ರಕರಣ ಸುಪ್ರೀಂಕೋರ್ಟ್ ಹೊರಭಾಗದ ನಂ.2ರಲ್ಲಿನ ನೋಟಿಸ್ ಬೋರ್ಡ್ ಮೇಲೆ ರಾಮ್ ಬಹಾದ್ದೂರ್ ಚೌಪಾಲ್ ಎಂಬವರು ತಮ್ಮ ಮೊಬೈಲ್ ಅನ್ನು ಇಟ್ಟಿದ್ದರು. ನಂತರ ಸ್ವಲ್ಪ ಹೊತ್ತಿನಲ್ಲಿ ಹಿಂತಿರುಗಿದ ಅವರು ಮೊಬೈಲ್ ತೆಗೆದುಕೊಳ್ಳಲು ಹೋದಾಗ, ಅದು ಅಲ್ಲಿಂದ ನಾಪತ್ತೆಯಾಗಿತ್ತು. ಈ ಬಗ್ಗೆ ರಾಮ್ ಬಹಾದ್ದೂರ್ ದೂರು ದಾಖಲಿಸಿದ್ದರು. ನಂತರ ಪೊಲೀಸರು ಸಿಸಿ ಟಿವಿ ಫೂಟೇಜ್ ಪರಿಶೀಲಿಸಿದಾಗ ಆರೋಪಿ ಜೀತ್ ಸಿಂಗ್ ಸಿಕ್ಕಿಬಿದ್ದಿದ್ದ. ಬಳಿಕ ಆತನಿಂದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಅದೇ ರೀತಿ ಸುಪ್ರೀಂಕೋರ್ಟ್ ಸಹಾಯಕ ವಕೀಲರಾದ ಸುಂದರ್ ಅವರ ಮೊಬೈಲ್ ಅನ್ನು ಸುಪ್ರೀಂಕೋರ್ಟ್ ರೂಂ ನಂಬರ್ 13ರಲ್ಲಿ ಕಳವು ಮಾಡಿರುವ ಘಟನೆ ಕೂಡ ನಡೆದಿದೆ. ಈ ಬಗ್ಗೆಯೂ ಸುಂದರ್ ದೂರು ದಾಖಲಿಸಿದ್ದಾರೆ. ಅಂತೂ ವಸ್ತು ಕಳೆದುಕೊಂಡು ಮರಳಿ ಸಿಗದವರು ಮಾತ್ರ ನ್ಯಾಯ ಎಲ್ಲಿದೆ...ನ್ಯಾಯ ಎಲ್ಲಿದೆ....ಎಂದು ಬಾಯಿ ಬಡಿದುಕೊಳ್ಳುವಂತಾಗಿದೆ!