ಇತಿಹಾಸ ಪ್ರಸಿದ್ಧ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಿರುವುದಾಗಿ ಪತ್ರ ಮುಖೇನ ತಿಳಿಸಿ ತೀವ್ರ ವಿವಾದ ಹುಟ್ಟು ಹಾಕಿದ್ದ ಕನ್ನಡದ ಹಿರಿಯ ಚಿತ್ರನಟಿ ಜಯಮಾಲಾ ವಿರುದ್ಧ ಕೇರಳ ಪೊಲೀಸರು ದೋಷಾರೋಪ ಪಟ್ಟಿ ಸಿದ್ದಪಡಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ತಾವು ಮಹಿಳೆಯರಿಗೆ ಪ್ರವೇಶ ನಿಷೇಧಿಸಲ್ಪಟ್ಟಿದ್ದ ಶಬರಿಮಲೈ ದೇವಾಲಯದೊಳಕ್ಕೆ ಪ್ರವೇಶಿಸಿ ಅಯ್ಯಪ್ಪ ಸ್ವಾಮಿ ವಿಗ್ರಹವನ್ನು ಮುಟ್ಟಿ ನಮಸ್ಕರಿಸಿದ್ದಾಗಿ ಜಯಮಾಲಾ ಹೇಳಿಕೆ ನೀಡಿದ್ದು, ಇದು ಧಾರ್ಮಿಕ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿವಾದ ಹುಟ್ಟುಹಾಕಿತ್ತು.
ಇದೀಗ ದೇಗುಲ ಪ್ರವೇಶ ಪ್ರಕರಣದಲ್ಲಿ ಜಯಮಾಲಾ ಅವರನ್ನು ಕೊಚ್ಚಿ ಪೊಲೀಸರು 4ನೆ ಆರೋಪಿ ಎಂದು ದೋಷಾರೋಪ ಪಟ್ಟಿಯಲ್ಲಿ ನಮೂದಿಸಿದ್ದಾರೆ. ಶೀಘ್ರವೇ ದೋಷಾರೋಪ ಪಟ್ಟಿಯನ್ನು ಕೊಟ್ಟಾಯಂ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.
ಖ್ಯಾತ ಜ್ಯೋತಿಷಿ ಉನ್ನಿಕೃಷ್ಣನ್ ಪಣಿಕ್ಕರ್ ಅವರನ್ನು ಮೊದಲನೆ ಆರೋಪಿಯನ್ನಾಗಿ ಸಹಾಯಕ ರಘುಪತಿ 2ನೆ ಆರೋಪಿ ಹಾಗೂ ದೇವಸ್ಥಾನದ ಇಒ ರಾಜಶೇಖರ್ ಅವರನ್ನು ಆರೋಪಿಯನ್ನಾಗಿ ಆರೋಪ ಪಟ್ಟಿ ಸಿದ್ದಪಡಿಸಲಾಗಿದೆ.
1987ರಲ್ಲಿ ಚಿತ್ರನಟಿ ಜಯಮಾಲಾ ಅಯ್ಯಪ್ಪಸ್ವಾಮಿ ದೇವಾಲಯದ ಗರ್ಭಗುಡಿ ಪ್ರವೇಶಿಸಿದ್ದರು. ಈ ಪ್ರಕರಣ 2006ರಲ್ಲಿ ಬೆಳಕಿಗೆ ಬಂದಿತ್ತು. ದೇವಸ್ಥಾನದ ಖ್ಯಾತ ಜ್ಯೋತಿಷಿ ಪಣಿಕ್ಕರ್ ಅವರು ಅಷ್ಟಮಂಗಲ ಪ್ರಶ್ನೆ ವೇಳೆಯಲ್ಲಿ ಯುವತಿಯೊಬ್ಬಳು ದೇವಳ ಗರ್ಭಗುಡಿ ಪ್ರವೇಶಿಸಿರುವ ಅಂಶ ತಿಳಿದು ಬಂದಿತ್ತು.
ನಂತರ ಈ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾದಾಗ ಪ್ರಕರಣಕ್ಕೆ ಸಂಬಂಧಸಿದಂತೆ ಜಯಮಾಲಾ ತಾವು 1987ರಲ್ಲಿ ಅಯ್ಯಪ್ಪಸ್ವಾಮಿ ಗರ್ಭಗುಡಿ ಪ್ರವೇಶಿಸಿರುವುದಾಗಿ ತಪ್ಪೊಪ್ಪಿಗೆಯ ಪತ್ರವೊಂದನ್ನು ದೇವಸ್ಥಾನದ ಪ್ರಧಾನ ಅರ್ಚಕರಿಗೆ ಫ್ಯಾಕ್ಸ್ ಮೂಲಕ ಕಳುಹಿಸಿದ್ದರು. ಈ ವಿಷಯ ಹೊರ ಬೀಳುತ್ತಿದ್ದಂತೆ ಇದು ಭಾರೀ ಕೋಲಾಹಲವನ್ನೇ ಸೃಷ್ಟಿಸಿತ್ತು. ಕೊಚ್ಚಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.