ಆಂಧ್ರಪ್ರದೇಶ, ಗುರುವಾರ, 11 ನವೆಂಬರ್ 2010( 12:44 IST )
ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಹೆತ್ತ ಮಗನನ್ನೇ ತಾಯಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಅಮಾನವೀಯ ಘಟನೆ ಆಂಧ್ರಪ್ರದೇಶದ ಕರ್ನೂಲ್ನಲ್ಲಿ ನಡೆದಿದೆ.
ಕರ್ನೂಲ್ ಜಿಲ್ಲೆಯ ಲಕ್ಷ್ಮೀದೇವಿ ಎಂಬಾಕೆ ಕಳೆದ ಎಂಟು ವರ್ಷಗಳ ಹಿಂದೆಯೇ ಗಂಡನನ್ನು ಬಿಟ್ಟಿದ್ದಳು. ಈಕೆಗೆ ಎಂಟು ವರ್ಷ ಪ್ರಾಯದ ಭಾಸ್ಕರ ಎಂಬ ಮಗನಿದ್ದಾನೆ. ಆದರೆ ಲಕ್ಷ್ಮೀದೇವಿ ಶ್ರೀನಿವಾಸ ಎಂಬ ವ್ಯಕ್ತಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು.
ಲಕ್ಷ್ಮೀದೇವಿ ಮತ್ತು ಶ್ರೀನಿವಾಸರ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದು ಮಗ ಭಾಸ್ಕರ. ತಮ್ಮಿಬ್ಬರ ಅನೈತಿಕ ಸಂಬಂಧದ ಕಳ್ಳಾಟಕ್ಕೆ ಸಮಸ್ಯೆಯಾಗಿರುವ ಮಗನನ್ನೇ ಕೊಂದು ಬಿಡುವ ನಿರ್ಧಾರಕ್ಕೆ ಲಕ್ಷ್ಮೀದೇವಿ ಬಂದಿದ್ದಳು.
ಅದಕ್ಕೆ ಸಿದ್ದತೆ ಮಾಡಿಕೊಂಡ ಲಕ್ಷ್ಮೀದೇವಿ ಮಗ ಭಾಸ್ಕರ ರಾತ್ರಿ ಮಲಗಿದ್ದಾಗ ಮುಗ್ದ ಬಾಲಕನ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿದ್ದಳು. ಆದರೆ ಚಾಲಕಿ ಲಕ್ಷ್ಮೀದೇವಿ ಇದೊಂದು ಆಕಸ್ಮಿಕ ಘಟನೆ ಎಂದು ಬೊಬ್ಬೆ ಹೊಡೆದಿದ್ದಳು.
ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದ ಮಗನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದ. ಇದೀಗ ಕರ್ನೂಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.