ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇಶವನ್ನು ಬ್ರಿಟಿಷರಿಗಿಂತಲೂ ಹೆಚ್ಚು ದೋಚಿದ ರಾಜಾ: ಜಯಾ (Jayalalithaa | A Raja | Telecom | 2G Spectrum Scam | UPA | DMK | Congress)
Bookmark and Share Feedback Print
 
PTI
ಟೆಲಿಕಾಂ ಸಚಿವ ಎ. ರಾಜಾ ಅವರನ್ನು 2ಜಿ ಹಗರಣದಲ್ಲಿ ರಕ್ಷಿಸುತ್ತಿರುವ ತಮ್ಮ ರಾಜಕೀಯ ಬದ್ಧ ವೈರಿ ಡಿಎಂಕೆ ವಿರುದ್ಧ ಮುಗಿಬಿದ್ದಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ನಾಯಕಿ ಜಯಲಲಿತಾ, ಬ್ರಿಟಿಷರು ತಮ್ಮ 90 ವರ್ಷದ ಆಳ್ವಿಕೆಯಲ್ಲಿ ಲೂಟಿ ಮಾಡಿದ್ದಕ್ಕಿಂತಲೂ ಹೆಚ್ಚು ಹಣವನ್ನು ಎ.ರಾಜಾ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜಾ ಕಿತ್ತೊಗೆಯುವ ಪ್ರತಿಪಕ್ಷಗಳ ತಾರಕ ಸ್ವರಕ್ಕೆ ಧ್ವನಿಗೂಡಿಸಿರುವ ಜಯಲಲಿತಾ, ಬ್ರಿಟಿಷರು 1857ರಿಂದ 1947ರ ಅವಧಿಯಲ್ಲಿ ಭಾರತವನ್ನು ದೋಚಿದ ಮೊತ್ತವನ್ನು ಇಂದಿನ ರೂಪಾಯಿ ಬೆಲೆಗೆ ಹೋಲಿಸಿದರೆ ಸುಮಾರು 900 ಕೋಟಿ ರೂ. ಮಾತ್ರ. ಈ ಕಾರಣಕ್ಕೆ ಇಡೀ ದೇಶವೇ ಇಂಗ್ಲೆಂಡ್ ವಿರುದ್ಧ ಸಿಡಿದೆದ್ದಿತು. ಈ ಆಕ್ರೋಶದ ಬೆಂಕಿ ಸ್ವಾತಂತ್ರ್ಯ ದೊರೆಯುವವರೆಗೂ ಶಮನವಾಗಿರಲಿಲ್ಲ ಎಂದರು.

ಆದರೆ ನೈತಿಕತೆಯೇ ಇಲ್ಲದಿರುವ ಪಕ್ಷದಿಂದ ಬಂದಿರುವ ರಾಜಾ ಅವರ ಈ ಹಗರಣವನ್ನು ಎಲ್ಲ ಹಗರಣಗಳ ತಾಯಿ ಎಂದೇ ಕರೆಯಬಹುದಾಗಿದ್ದು, 2ಜಿ ಸ್ಪೆಕ್ರ್ಟಂ ಹರಾಜು ಹಾಕುವ ಬದಲು, ತೀರಾ ಕಡಿಮೆ ಬೆಲೆಗೆ ತಮಗೆ ಬೇಕಾದವರಿಗೆ ಮಾತ್ರ ಹಂಚಿ ಖಜಾನೆಗೆ 1,76,379 ಕೋಟಿ ರೂಪಾಯಿ ನಷ್ಟವಾಗುವಂತೆ ಮಾಡಿದ್ದಾರೆ ಎಂದು ಸಿಎಜಿ ವರದಿಯೇ ಹೇಳಿದೆ. ಅಂದರೆ, ಬ್ರಿಟಿಷರಿಗಿಂತಲೂ 200 ಪಟ್ಟು ಹೆಚ್ಚು ಲೂಟಿ ಮಾಡಿದ್ದಾರೆ ಅವರು ಎಂದು ಜಯಾ ಕೆಂಡ ಕಾರಿದರು.

ಇದೇ ಹಣ ಈಗ ಕೇಂದ್ರ ಸರಕಾರದ ಬಳಿ ಇದ್ದಿದ್ದರೆ, ನಮಗೆ ಪೆಟ್ರೋಲಿಯಂ ದರ ಏರಿಕೆ ಮಾಡಬೇಕಾಗುತ್ತಿರಲಿಲ್ಲ, ಜನ ಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಬೇಕಾಗಿರುತ್ತಿರಲಿಲ್ಲ, ಸುಮಾರು 2 ಕೋಟಿ ಬಡವರಿಗೆ 1 ಲಕ್ಷ ರೂಪಾಯಿಯಲ್ಲಿ ಮನೆಗಳನ್ನು ನಿರ್ಮಿಸಿ ನೀಡಬಹುದಾಗಿತ್ತು, ಗಂಗಾ ನದಿಯನ್ನೂ ಶುದ್ಧೀಕರಿಸಬಹುದಿತ್ತು. ಕೇಂದ್ರೀಯ ವಿಚಕ್ಷಣಾ ದಳ (ಸಿವಿಸಿ), ದೆಹಲಿ ಹೈಕೋರ್ಟ್, ಸುಪ್ರೀಂ ಕೋರ್ಟ್, ಸಿಎಜಿ... ಇವೆಲ್ಲವೂ ಛೀಮಾರಿ ಹಾಕಿದ್ದರೂ, ಕಾಂಗ್ರೆಸ್ ಪಕ್ಷವು ಈ ಹಗರಣಕೋರನನ್ನು ರಕ್ಷಿಸುತ್ತಿರುವುದು ದುರ್ದೈವ ಎಂದು ಜಯಲಲಿತಾ ಹೇಳಿದ್ದಾರೆ.

ಈ ದೇಶವನ್ನು ರಕ್ಷಿಸಬೇಕಿದ್ದರೆ, ನನ್ನ ಪಕ್ಷೀಯರು, ತಮಿಳರು ಮಾತ್ರವೇ ಅಲ್ಲ, ಇಡೀ ದೇಶದ ಪ್ರಜೆಗಳು ಎ.ರಾಜಾ ಉಚ್ಚಾಟಿಸುವಂತೆ ಕೋರಿ ರಾಷ್ಟ್ರಪತಿಯವರಿಗೆ ಟೆಲಿಗ್ರಾಂಗಳನ್ನು ಕಳುಹಿಸಬೇಕೆಂದು ಕರೆ ನೀಡುತ್ತಿರುವುದಾಗಿ ಹೇಳಿರುವ ಜಯಲಲಿತಾ, ಜನರ ಶಕ್ತಿಯೊಂದೇ ಈ ದೇಶವನ್ನು ರಕ್ಷಿಸಬಲ್ಲುದು ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ