ದೇಶದ ಖಜಾನೆಗೆ 1.76 ಲಕ್ಷ ಕೋಟಿ ರೂ. ನಷ್ಟ ತಂದಿರುವ ಹಗರಣದ ಆರೋಪದಲ್ಲಿ ಮುಳುಗಿಹೋಗಿರುವ ಎ.ರಾಜಾ ಉಚ್ಚಾಟನೆಗೆ ಪ್ರತಿಪಕ್ಷಗಳ ಕೂಗಾಟ ಗದ್ದಲ ಹೆಚ್ಚಾಗುತ್ತಿರುವಂತೆಯೇ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ರಾಜಾ ರಕ್ಷಣೆಗೆ ಬಲವಾಗಿ ನಿಂತಿದ್ದು, ಸುಪ್ರೀಂ ಕೋರ್ಟಿನಲ್ಲಿ ಅವರನ್ನು ಸಮರ್ಥಿಸಿಕೊಂಡು ಹಗರಣವೇ ನಡೆದಿಲ್ಲ ಎಂದು ಅಫಿದವಿತ್ ಸಲ್ಲಿಸಿದೆ.
2ಜಿ ಸ್ಪೆಕ್ಟ್ರಂ ಹಂಚಿಕೆಯಿಂದ ದೇಶದ ಖಜಾನೆಗೆ ನಷ್ಟವಾಗಿದೆ ಎಂಬ ವರದಿಗಳನ್ನೂ ಸರಕಾರವು ಅಲ್ಲಗಳೆದಿದೆ.
ಸಿಎಜಿಗೆ ಅಧಿಕಾರವೇ ಇಲ್ಲ! ದೇಶದ ಮಹಾ ಲೆಕ್ಕಪತ್ರಾಧಿಕಾರಿ (ಸಿಎಜಿ) ಅವರಿಗೆ 2008ರಲ್ಲಿ ಟೆಲಿಕಾಂ ಕಂಪನಿಗಳಿಗೆ ಪರವಾನಗಿ ನೀಡಿರುವ ಶಾಸನಾತ್ಮಕ ನಿರ್ಧಾರಗಳನ್ನು ಪ್ರಶ್ನಿಸುವ ಅಧಿಕಾರವೇ ಇಲ್ಲ ಎಂದು ಟೆಲಿಕಾಂ ಸಚಿವಾಲಯವು ಸುಪ್ರೀಂ ಕೋರ್ಟಿನಲ್ಲಿ ವಾದಿಸಿದೆ.
ಸದ್ಯಕ್ಕಂತೂ ಕ್ರಮ ಕೈಗೊಳ್ಳುವುದಿಲ್ಲ ಯುಪಿಎ ಕರುಣಾನಿಧಿಯವರ ಡಿಎಂಕೆ ತಮ್ಮ ಪಕ್ಷದ ದಿಲ್ಲಿ ನಾಯಕನ ಹಿಂದೆ ಬಲವಾಗಿ ನಿಂತಿರುವುದರಿಂದಾಗಿ, ಸದ್ಯಕ್ಕೆ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ರಾಜಾ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂಬುದಕ್ಕೆ ಸಾಕಷ್ಟು ಸುಳಿವುಗಳು ದೊರೆತಿದೆ.
ರಾಜಾ ವಿರುದ್ಧ ಕೈಗೊಳ್ಳಲಾಗುವ ಯಾವುದೇ ಸಂಭಾವ್ಯ ಕ್ರಮಗಳನ್ನು ತಡೆಯಲು ಕರುಣಾನಿಧಿಯ ಪುತ್ರಿ, ಸಂಸದೆ ಕನಿಮೋಳಿ ಅವರು ಗುರುವಾರ ಕಾಂಗ್ರೆಸ್ನ ಟ್ರಬಲ್ಶೂಟರ್ ಆಗಿರುವ ವಿತ್ತ ಸಚಿವ ಪ್ರಣಬ್ ಮುಖರ್ಜಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಂತೆಯೇ ರಾಜಾ ಅವರನ್ನು ಸಂಪುಟದಿಂದ ಕಿತ್ತು ಹಾಕದಂತೆ ಒತ್ತಡ ಹೇರಿದರು ಎಂದು ಮೂಲಗಳು ಹೇಳಿವೆ.
2ಜಿ ಸ್ಪೆಕ್ಟ್ರಂ ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆಯಾಗಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಗಲಾಟೆ ಮಾಡಿ, ಕಲಾಪವೇ ಸ್ಥಗಿತಗೊಂಡಿದ್ದರೂ, ಈ ಬೇಡಿಕೆಯನ್ನು ತಿರಸ್ಕರಿಸಿದ ಕಾಂಗ್ರೆಸ್, ಸಿಎಜಿ ವರದಿಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾದ ಬಳಿಕವಷ್ಟೇ ಯಾವುದೇ ಕ್ರಮ ಕೈಗೊಳ್ಳುವುದು ಸಾಧ್ಯ ಎಂದಿದೆ.