ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸುದರ್ಶನ್ ವಿರುದ್ಧ ಎಫ್ಐಆರ್; ಆರೆಸ್ಸೆಸ್ ನಿಷೇಧಿಸಿ-ಕಾಂಗ್ರೆಸ್ (K S Sudarshan | Defamation case | Sonia Gandhi | RSS)
ಸುದರ್ಶನ್ ವಿರುದ್ಧ ಎಫ್ಐಆರ್; ಆರೆಸ್ಸೆಸ್ ನಿಷೇಧಿಸಿ-ಕಾಂಗ್ರೆಸ್
ನವದೆಹಲಿ, ಶನಿವಾರ, 13 ನವೆಂಬರ್ 2010( 12:11 IST )
PTI
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅಮೆರಿಕದ ಸಿಐಎ ಏಜೆಂಟ್, ಅಕ್ರಮ ಸಂತಾನ ಎಂದೆಲ್ಲ ಮಾನಹಾನಿಕರ ಹೇಳಿಕೆ ನೀಡಿದ್ದ ಆರ್ಎಸ್ಎಸ್ ಮಾಜಿ ಮುಖ್ಯಸ್ಥ ಕೆ.ಎಸ್.ಸುದರ್ಶನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.
ಭೋಪಾಲ್ನ ಪ್ರಧಾನ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕಾಂಗ್ರೆಸ್ನ ಸ್ಥಳೀಯ ಮುಖಂಡ ಪ್ರದೀಪ್ ಶರ್ಮಾ ಎಂಬವರು ಈ ಮೊಕದ್ದಮೆ ದಾಖಲಿಸಿದ್ದಾರೆ.
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ವಿರುದ್ಧ ಸುದರ್ಶನ್ ಅವರು ಬಳಸಿದ ಭಾಷೆ ತುಂಬಾ ಮಾನಹಾನಿಕಾರವಾಗಿದ್ದು, ಆ ನಿಟ್ಟಿನಲ್ಲಿ ಸುದರ್ಶನ್ ಅವರ ಹೇಳಿಕೆಯ ವಿರುದ್ಧ ಪರಿಶೀಲನೆ ನಡೆಸಿ ತಕ್ಕ ಶಿಕ್ಷೆ ನೀಡಬೇಕೆಂದು ಶರ್ಮಾ ಅರ್ಜಿಯಲ್ಲಿ ತಿಳಿಸಿದ್ದಾರೆ.
ಭಯೋತ್ಪಾದನೆಗೆ ಸಂಬಂಧಿಸಿದಂತೆ ಕೇಂದ್ರದ ಆಡಳಿತಾರೂಢ ಯುಪಿಎ ಸರಕಾರ ಆರ್ಎಸ್ಎಸ್ ವಿರುದ್ಧ ಸಂಚು ರೂಪಿಸಿ ಗೂಬೆ ಕೂರಿಸುತ್ತಿರುವುದನ್ನು ಖಂಡಿಸಿ ಭೋಪಾಲ್ನಲ್ಲಿ ಪ್ರತಿಭಟನಾ ಸಭೆ ನಡೆಸಿದ ನಂತರ, ಸುದರ್ಶನ್ ಅವರು ಹಿಂದಿ ದೈನಿಕದ ಜೊತೆ ಮಾತನಾಡುತ್ತ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಹತ್ಯೆಗೆ ಸೋನಿಯಾ ಗಾಂಧಿಯೇ ಸಂಚು ರೂಪಿಸಿದ್ದರು.ಅಲ್ಲದೇ ಆಕೆ ಸಿಐಎ ಏಜೆಂಟ್ ಎಂದು ವಾಗ್ದಾಳಿ ನಡೆಸಿದ್ದರು.
ತದನಂತರ ಸೋನಿಯಾಗೆ ಅವಮಾನ ಮಾಡಿದ ಸುದರ್ಶನ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ದೇಶವ್ಯಾಪಿ ಪ್ರತಿಭಟನೆ ನಡೆಸಿ, ಸುದರ್ಶನ್ ಅವರ ಪ್ರತಿಕೃತಿ ದಹಿಸಿದ್ದರು.
ಆರೆಸ್ಸೆಸ್ ನಿಷೇಧಕ್ಕೆ ಆಗ್ರಹ: ಸೋನಿಯಾ ಗಾಂಧಿ ವಿರುದ್ಧ ಕೀಳುಮಟ್ಟದ ಭಾಷೆ ಉಪಯೋಗಿಸಿ ಹೇಳಿಕೆ ನೀಡಿರುವ ಕೆ.ಎಸ್.ಸುದರ್ಶನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ರಾಷ್ಟ್ರೀಯ ಸ್ವಯಂ ಸೇವಕ ಸಂಘಟವನ್ನು ನಿಷೇಧಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಲು ಕೇಂದ್ರ ಸರಕಾರ ಮುಂದಾಗಬೇಕೆಂದು ಕಾಂಗ್ರೆಸ್ ವಕ್ತಾರ ಶಕೀಲ್ ಅಹ್ಮದ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಆರ್ಎಸ್ಸೆಸ್ಸಿಗರ ಮನಸ್ಥಿತಿಯೇ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತಹದ್ದು, ಹಾಗಾಗಿ ಅವರ ರೀತಿ,ನೀತಿ ಈ ದೇಶಕ್ಕೆ ಗಂಭೀರ ಸ್ವರೂಪದ ಬೆದರಿಕೆಯಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದರು.