ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂತ್ರಸ್ತರೊಂದಿಗೆ ಲಾಭ ಹಂಚಿಕೆ: ಹೊಸ ಗಣಿ ಮಸೂದೆ ಸಿದ್ಧ
(Mines Ministry | Mines Bill | Profit-sharing | Winter Session | B K Handique)
ಯೋಜನಾ ಸಂತ್ರಸ್ತರೊಂದಿಗೆ ಶೇ.26 ಲಾಭಾಂಶ ಹಂಚಿಕೆ ಪ್ರಸ್ತಾಪವುಳ್ಳ ಹೊಸ ಗಣಿ ಮಸೂದೆಯ ಕರಡು ಅಂತಿಮಗೊಂಡಿದ್ದು, ಅದನ್ನು ಈಗ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದು ಕೇಂದ್ರ ಗಣಿ ಇಲಾಖೆ ಸಚಿವ ಬಿ.ಕೆ.ಹಾಂಡಿಕ್ ತಿಳಿಸಿದ್ದಾರೆ.
ಗಣಿ ಮತ್ತು ಖನಿಜ ಸಂಪನ್ಮೂಲ ಅಭಿವೃದ್ಧಿ ಹಾಗೂ ನಿಯಂತ್ರಣ ಕಾಯಿದೆಯ ಕುರಿತು ಯಾವುದೇ ದಿನ ಸಚಿವರ ಮಂಡಳಿಯು ಸಭೆ ಸೇರಬಹುದಾಗಿದೆ. ನಾವು ಕರಡು ಸಿದ್ಧಪಡಿಸಿದ್ದೇವೆ. ಆದರೆ ಒಂದಿಷ್ಟು ಬದಲಾವಣೆಗಳಿರಬಹುದು ಎಂದು ಹಾಂಡಿಕ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗಣಿಧಣಿಗಳು ಯೋಜನಾ ಸಂತ್ರಸ್ತರೊಂದಿಗೆ ಶೇ.26ರ ಲಾಭಾಂಶ ಹಂಚುವ ಕುರಿತಾದ ವಿಧಿಯನ್ನು ಮಾತ್ರ ತಿದ್ದುಪಡಿ ಮಾಡುವುದಿಲ್ಲ ಎಂದೂ ಹಾಂಡಿಕ್ ಎಚ್ಚರಿಸಿದರು. ಈ ವಿಧಿಯ ಕುರಿತು ಗಣಿ ಮಾಲೀಕರು ತೀವ್ರ ಆಕ್ಷೇಪ ಎತ್ತುತ್ತಿದ್ದಾರೆ.
ವಿತ್ತ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದ 10 ಸದಸ್ಯರ ಸಚಿವ ಮಂಡಳಿಯು ಕಳೆದ ತಿಂಗಳು ಗಣಿ ಮಸೂದೆ ಕುರಿತು ಒಮ್ಮತಾಭಿಪ್ರಾಯ ವ್ಯಕ್ತಪಡಿಸಿತ್ತು. ಲಾಭ ಹಂಚಿಕೆ ಪ್ರಸ್ತಾವನೆಗೆ ಸಂಬಂಧಿಸಿದಂತೆ, ಜಿಲ್ಲಾ ಗಣಿ ಪ್ರತಿಷ್ಠಾನ ಸ್ಥಾಪಿಸಿ, ಅದರ ಮೂಲಕ ಸ್ಥಳೀಯರಿಗೆ ಲಾಭಾಂಶ ವಿತರಣೆಗೆ ಅವಕಾಶವಿರುತ್ತದೆ. ಈ ಮಸೂದೆ ಬಗ್ಗೆ ಸಚಿವರ ಮಂಡಳಿಯು ಮೂರು ಬಾರಿ ಸಭೆ ನಡೆಸಿದೆ. ಗಣಿ ಸಂಸ್ಥೆ ಎಫ್ಐಎಂಐ ಮತ್ತು ಜಿಂದಾಲ್ ಸ್ಟೀಲ್ ಹಾಗೂ ಟಾಟಾ ಮುಂತಾದ ಉಕ್ಕಿನ ಕಂಪನಿಗಳು ಪ್ರಸ್ತಾಪಿತ ಮೇಲ್ತೆರಿಗೆಯನ್ನು ಟೀಕಿಸಿದ್ದವು ಮತ್ತು ಪ್ರತ್ಯೇಕ ತೆರಿಗೆಯಂತೆ ಶುಲ್ಕ ವಿಧಿಸಬೇಕೆಂದು ಆಗ್ರಹಿಸಿದ್ದವು.