ಬಿಜೆಪಿಗೆ ತಿರುಗಿ ಬಿದ್ದ ಎಡಪಕ್ಷಗಳು; ಕಾಂಗ್ರೆಸ್ ತಂತ್ರ ಯಶಸ್ವಿ
ನವದೆಹಲಿ, ಮಂಗಳವಾರ, 23 ನವೆಂಬರ್ 2010( 20:29 IST )
2ಜಿ ಹಗರಣದ ಕುರಿತು ಜಂಟಿ ಸದನ ಸಮಿತಿ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದ ಸಿಪಿಐಎಂ ತನ್ನ ನಿಲುವು ಬದಲಾಯಿಸಿದಂತೆ ತೋರುತ್ತಿದೆ. ಈ ಸಂಬಂಧ ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ ನಡೆಸಿದ ಸಂಧಾನ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ. ಇದು ಬಹಿರಂಗವಾಗಿರುವುದು ಎಡಪಕ್ಷವು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿರುವುದರ ಮೂಲಕ.
ಕಳೆದ ಹತ್ತು ದಿನಗಳಿಂದ ಬಿಜೆಪಿ, ಎಡಪಕ್ಷಗಳು ಮತ್ತು ಇತರ ಪ್ರತಿಪಕ್ಷಗಳು 2ಜಿ ಹಗರಣದ ಕುರಿತು ಜಂಟಿ ಸದನ ಸಮಿತಿ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಾ ಬಂದಿದ್ದವು. ಈ ಕುರಿತು ಸರಕಾರ ಯತ್ನಿಸಿದ್ದ ಸಂಧಾನಗಳು ನಿನ್ನೆಯವರೆಗೆ ವಿಫಲವಾಗಿದ್ದವು. ಆದರೆ ಇಂದು ಪರಿಸ್ಥಿತಿ ಬದಲಾಗಿರುವಂತೆ ಕಂಡು ಬರುತ್ತಿದೆ.
ಎಡಪಕ್ಷಗಳನ್ನು ಒಲಿಸುವಲ್ಲಿ ಪ್ರಣಬ್ ಯಶಸ್ವಿಯಾಗಿದ್ದಾರೆ. ಜಂಟಿ ಸದನ ಸಮಿತಿ ತನಿಖೆಯ ಒತ್ತಾಯವನ್ನು ಕೈ ಬಿಡಲಿವೆ ಎಂದು ಮೂಲಗಳು ಹೇಳಿವೆ. ಇದು ನಾಳಿನ ಅಧಿವೇಶನ ಆರಂಭವಾಗುವ ಹೊತ್ತಿಗೆ ಖಚಿತವಾಗಲಿದೆ.
ಬಿಜೆಪಿ ಇಬ್ಬಗೆಯ ನೀತಿ: ಸಿಪಿಎಂ, ಕಾಂಗ್ರೆಸ್ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಮುಂದುವರಿಸುವ ಮೂಲಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಿಜೆಪಿ ತನ್ನ ಇಬ್ಬಗೆಯ ನೀತಿಯನ್ನು ಪ್ರದರ್ಶಿಸುತ್ತಿದೆ ಎಂದು ಕಾಂಗ್ರೆಸ್ ಮತ್ತು ಸಿಪಿಎಂ (ಮಾರ್ಕಿಸ್ಟ್) ವಾಗ್ದಾಳಿ ನಡೆಸಿವೆ.
ಇದು ಬಿಜೆಪಿಯ ಇಬ್ಬಗೆಯ ನೀತಿ. ಕಳಂಕಿತ ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಈ ವಿಚಾರದ ಕುರಿತು ಬಿಜೆಪಿ ತುಟಿ ಬಿಚ್ಚುತ್ತಿಲ್ಲ. ಈ ಇಬ್ಬಗೆಯ ನೀತಿಯು ಆ ಪಕ್ಷದ ನಿಲುವನ್ನು ಜಗಜ್ಜಾಹೀರು ಮಾಡಿದೆ ಎಂದು ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಆರೋಪಿಸಿದ್ದಾರೆ.
ಇದೇ ವಿಚಾರವನ್ನು ಮುಂದಿಟ್ಟಿರುವ ಸಿಪಿಐಎಂ ನಾಯಕಿ ಬೃಂದಾ ಕಾರಟ್, ಕರ್ನಾಟಕ ಮುಖ್ಯಮಂತ್ರಿಯ ರಾಜೀನಾಮೆಯನ್ನು ತಕ್ಷಣ ಪಡೆದುಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ; ಅದು ತನ್ನ ಮೂಲಭೂತ ಪ್ರಶ್ನೆಯನ್ನೇ ಎತ್ತಿಲ್ಲ. ಇದು ಬಿಜೆಪಿಯ ಇಬ್ಬಗೆಯ ನೀತಿಯನ್ನು ತೋರಿಸುತ್ತಿದೆ ಎಂದಿದ್ದಾರೆ.
2ಜಿ ತರಂಗಾಂತರ ಹಂಚಿಕೆ ವಿಚಾರದಲ್ಲಿ ಸಂಸತ್ತಿನಲ್ಲಿ ಒಟ್ಟಾಗಿರುವ ಹೊತ್ತಿನಲ್ಲಿ ಬಿಜೆಪಿಯ ಕರ್ನಾಟಕದ ಕುರಿತ ಇಬ್ಬಗೆಯ ನೀತಿಯು ನಮ್ಮ ಆತಂಕಕ್ಕೆ ಕಾರಣವಾಗಿದೆ, ಇದು ನಮ್ಮ ನೈತಿಕ ಸ್ಥೈರ್ಯಕ್ಕೆ ಏಟು ನೀಡಿದಂತಾಗಿದೆ ಎಂದು ಕಾರಟ್ ಅಭಿಪ್ರಾಯಪಟ್ಟಿದ್ದಾರೆ.