ಕಳಂಕಿತ ಎಂಬ ಆರೋಪ ಹೊತ್ತಿರುವ ಪಿ.ಜೆ. ಥಾಮಸ್ 2ಜಿ ಹಗರಣದ ಸಂಬಂಧ ಸಿಬಿಐ ನಡೆಸುತ್ತಿರುವ ತನಿಖೆಯ ಮೇಲ್ವಿಚಾರಣೆಯನ್ನು ವಹಿಸುವುದಿಲ್ಲ ಎಂದು ಕೇಂದ್ರ ಸರಕಾರವು ಸುಪ್ರೀಂ ಕೋರ್ಟಿಗೆ ಉತ್ತರಿಸಿದೆ. ಇದರ ಬೆನ್ನಿಗೆ ಪ್ರತಿಕ್ರಿಯಿಸಿರುವ ಥಾಮಸ್, ತಾನು ಕೇಂದ್ರೀಯ ಜಾಗೃತ ದಳದ ಆಯುಕ್ತ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೂರಸಂಪರ್ಕ ಇಲಾಖೆಯಲ್ಲಿದ್ದ ಹೊತ್ತಿನಲ್ಲಿ 2ಜಿ ಹಗರಣ ಆರೋಪ ಹೊತ್ತಿದ್ದ ಥಾಮಸ್ ಕೇಂದ್ರೀಯ ಜಾಗೃತ ದಳದಲ್ಲಿ 2ಜಿ ಹಗರಣವನ್ನು ಹೇಗೆ ಮೇಲ್ವಿಚಾರಣೆ ನಡೆಸುತ್ತಾರೆ ಎಂದು ಮಂಗಳವಾರ ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ಇದಕ್ಕೆ ಇಂದು ಉತ್ತರ ನೀಡಿರುವ ಕೇಂದ್ರ ಸರಕಾರ, ಥಾಮಸ್ 2ಜಿ ಹಗರಣದ ಸಿಬಿಐ ತನಿಖೆಯ ಮೇಲ್ವಿಚಾರಣೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ನಡುವೆ ಪ್ರತಿಕ್ರಿಯೆ ನೀಡಿರುವ ಥಾಮಸ್, ಸರಕಾರ ನನ್ನನ್ನು ಕೇಂದ್ರೀಯ ಜಾಗೃತ ದಳದ (ಸಿವಿಸಿ) ಆಯುಕ್ತರನ್ನಾಗಿ ನೇಮಿಸಿದೆ. ಅದರಲ್ಲೇ ಮುಂದುವರೆಯಲು ಬಯಸುತ್ತೇನೆ. ಪ್ರಕರಣ ಸರ್ವೋಚ್ಚ ನ್ಯಾಯಾಲಯದ ವಿಚಾರಣೆಯಲ್ಲಿರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
2ಜಿ ಹಗರಣದ ಕಾಲಾವಧಿಯಲ್ಲಿ ಥಾಮಸ್ ಟೆಲಿಕಾಂ ಕಾರ್ಯದರ್ಶಿಯಾಗಿದ್ದರು. ಅಂಥವರನ್ನೇ 2ಜಿ ಹಗರಣದ ತನಿಖೆ ಹೊತ್ತಿರುವ ಸಮಿತಿಯಲ್ಲೊಂದಾದ ಸಿವಿಸಿಯ ಆಯುಕ್ತರನ್ನಾಗಿ ನೇಮಿಸಿದಕ್ಕೆ ಸುಪ್ರಿಂ ಕೋರ್ಟ್ ಸ್ಪಷ್ಟನೆ ಕೇಳಿತ್ತು. ಈ ಹಿನ್ನೆಲೆಯಲ್ಲಿ ಥಾಮಸ್ ಸಿವಿಸಿಗೆ ರಾಜೀನಾಮೆ ನೀಡಲಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ ಅವರು ಇದರಿಂದ ಪಾರಾಗುವಲ್ಲಿ ಇದೀಗ ಯಶಸ್ವಿಯಾಗಿದ್ದಾರೆ.
ಅರವತ್ತು ವರ್ಷದ ಥಾಮಸ್ ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸಿಂಗಾಪುರದ ಪ್ರಸಿದ್ಧ ಕಂಪನಿಯೊಂದರಿಂದ ಪಾಮೋಲಿನ್ ಆಮದು ಮಾಡಿಕೊಂಡ ಪ್ರಕರಣದಲ್ಲಿ ಕ್ರಿಮಿನಲ್ ಆರೋಪಕ್ಕೊಳಗಾಗಿದ್ದರು.
ಇಂತಹ ಕಳಂಕಿತ ವ್ಯಕ್ತಿಯನ್ನು ಸಿವಿಸಿಗೆ ನೇಮಕ ಮಾಡಬಾರದು ಎಂದು ಬಿಜೆಪಿ ಹೇಳುತ್ತಾ ಬಂದಿತ್ತು. ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಈ ಸಂಬಂಧ ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ಗೆ ಲಿಖಿತ ದೂರು ಸಲ್ಲಿಸಿದ್ದರು. ಆದರೂ ಪ್ರಧಾನಿ ನೇತೃತ್ವದ ತ್ರಿಸದಸ್ಯ ಸಮಿತಿಯು ಥಾಮಸ್ರನ್ನೇ ಆಯುಕ್ತರನ್ನಾಗಿ ಆಯ್ಕೆ ಮಾಡಿತ್ತು.