ಪವಿತ್ರ ಅಯೋಧ್ಯೆಯಲ್ಲೇ ರಾಮಮಂದಿರ ನಿರ್ಮಾಣ ಮಾಡಲಾಗುತ್ತದೆ ಎಂದು ಶಪಥಗೈದಿರುವ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಶೋಕ್ ಸಿಂಘಾಲ್, ಅಂದುಕೊಂಡದ್ದನ್ನು ಸಾಧಿಸುವ ನಿಟ್ಟಿನಲ್ಲಿ ವಿಎಚ್ಪಿ ರಾಷ್ಟ್ರದಾದ್ಯಂತ ಜಾಗೃತಿ ಮೂಡಿಸಲಿದೆ ಎಂದಿದ್ದಾರೆ.
ರಾಮ್ಲಾಲಾ (ಬಾಲ ರಾಮ) ಅಸ್ತಿತ್ವ ನ್ಯಾಯಾಲಯಗಳಲ್ಲಿ ರುಜುವಾತಾಗಿದೆ. ಭವ್ಯ ದೇಗುಲ ಅಯೋಧ್ಯೆಯಲ್ಲೇ ನಿರ್ಮಾಣವಾಗುತ್ತದೆ. ಅದಕ್ಕಾಗಿ ನಾವು ಸಾರ್ವಜನಿಕ ಸಮಾರಂಭಗಳ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸಲಿದ್ದೇವೆ. ಯಾಗ-ಯಜ್ಞಗಳನ್ನು ಕೂಡ ನಡೆಸುತ್ತೇವೆ. ನಮ್ಮ ನಿಲುವುಗಳನ್ನು ಬೆಂಬಲಿವು ಸಾಕಷ್ಟು ಸಂಸದರನ್ನು ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದ್ದೇನೆ ಎಂದು ಸಿಂಘಾಲ್ ನುಡಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸುಗಮವಾಗಲು ಸಂಸತ್ತು ಕಾಯ್ದೆಯೊಂದನ್ನು ರೂಪಿಸಬೇಕು ಎಂಬ ಬೇಡಿಕೆಯ ಕುರಿತು ಡಿಸೆಂಬರ್ 18ರಂದು ಜೈಪುರದಲ್ಲಿ ವಿಎಚ್ಪಿ ಸಭೆಯೊಂದನ್ನು ಹಮ್ಮಿಕೊಂಡಿದೆ. ಆ ದಿನ ಇಲ್ಲಿ ಯಜ್ಞವೂ ನಡೆಯಲಿದೆ.
90ರ ದಶಕದಲ್ಲಿ ರಾಮಮಂದಿರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಸಾಧ್ವಿ ರೀತಾಂಬರ ಈ ಎರಡೂ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಬೇಡಿಕೆಯ ಈಡೇರಿಕೆಗೆ ಒತ್ತಾಯಿಸಲಿದ್ದಾರೆ ಎಂದು ಸಿಂಘಾಲ್ ತಿಳಿಸಿದ್ದಾರೆ.
ಅಲ್ಲದೆ ದೇಗುಲ ನಿರ್ಮಾಣಕ್ಕಾಗಿ ಮತ್ತೆ ದೇಣಿಗೆ ಸಂಗ್ರಹಿಸುವ ನಿರ್ಧಾರಕ್ಕೂ ವಿಶ್ವ ಹಿಂದೂ ಪರಿಷತ್ ಬಂದಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಹಾಯ ಮಾಡಲು ಇಚ್ಛಿಸುವ ಸಾರ್ವಜನಿಕರು ಮತ್ತೆ ತಮ್ಮ ಕೈಲಾಗುವ ಸಣ್ಣ ಮೊತ್ತವನ್ನು ದೇಣಿಗೆ ರೂಪದಲ್ಲಿ ನೀಡಿ ಬೆಂಬಲಿಸಬೇಕು ಎಂದು ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ವಿಎಚ್ಪಿ ಹೇಳಿದೆ.