ಆರೆಸ್ಸೆಸ್-ಅಜ್ಮೀರ್ ಸ್ಫೋಟ; ಸಿಬಿಐ ತನಿಖೆಗೆ ಕಾಂಗ್ರೆಸ್ ಪಟ್ಟು
ನವದೆಹಲಿ, ಶನಿವಾರ, 18 ಡಿಸೆಂಬರ್ 2010( 20:13 IST )
ರಾಹುಲ್ ಗಾಂಧಿ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಪ್ರತಿತಂತ್ರ ಹೆಣೆಯಲಾರಂಭಿಸಿದೆ. ಅಜ್ಮೀರ್ ದರ್ಗಾ ಸ್ಫೋಟದ ರೂವಾರಿ ಎಂದು ಆರೋಪಿಸಲಾಗಿರುವ ಆರೆಸ್ಸೆಸ್ ಕಾರ್ಯಕರ್ತ ಸುನಿಲ್ ಜೋಷಿಯನ್ನು ಆರೆಸ್ಸೆಸ್ ನಾಯಕರೇ ಕೊಲೆ ಮಾಡಿಸಿದ್ದು, ಈ ಸಂಬಂಧ ಸಿಬಿಐ ತನಿಖೆ ನಡೆಸಬೇಕೆಂದು ಪಕ್ಷ ಒತ್ತಾಯಿಸಿದೆ.
2007ರ ಅಕ್ಟೋಬರ್ ತಿಂಗಳಲ್ಲಿ ನಡೆದ ಹೈದರಾಬಾದ್ ಅಜ್ಮೀರ್ ದರ್ಗಾ ಸ್ಫೋಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗಿರುವ ಸುನಿಲ್ ಜೋಷಿಯವರನ್ನು 2007ರ ಡಿಸೆಂಬರ್ 29ರಂದು ಹತ್ಯೆಗೈಯಲಾಗಿತ್ತು. ಇದರ ತನಿಖೆ ನಡೆಸುತ್ತಿದ್ದ ಪೊಲೀಸರು, ತಾವು ಜೋಷಿ ಕೊಲೆಯ ನಿಗೂಢತೆಯನ್ನು ಭೇದಿಸಿದ್ದೇವೆ ಎಂದು ಶನಿವಾರ ಹೇಳಿಕೊಂಡ ನಂತರ ಕಾಂಗ್ರೆಸ್ ಸಿಬಿಐ ತನಿಖೆಗೆ ಒತ್ತಾಯಿಸಿದೆ.
ಜೋಷಿ ಹತ್ಯೆ ಸಂಬಂಧ ರಾಜಸ್ತಾನ ಪೊಲೀಸರು ವಾಸುದೇವ ಪರ್ಮರ್ ಮತ್ತು ಆನಂದ್ ರಾಜ್ ಎಂಬವರನ್ನು ಬಂಧಿಸಿದೆ. ಇನ್ನೊಬ್ಬ ಆರೋಪಿ ಹರ್ಷದ್ ಸೋಲಂಕಿ ಸ್ಫೋಟ ಸಂಬಂಧ ಪ್ರಸಕ್ತ ಪೊಲೀಸ್ ವಶದಲ್ಲಿದ್ದಾನೆ. ಜೋಷಿಯವರನ್ನು ಕೊಂದಿರುವುದು ತಾನೇ ಎಂದು ಸೋಲಂಕಿ ಹೇಳಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಇದರೊಂದಿಗೆ ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ಜೋಷಿಯನ್ನು ಆರೆಸ್ಸೆಸ್ನವರೇ ಕೊಂದಿರುವುದು ಖಚಿತವಾಗಿದೆ. ಹಾಗಾಗಿ ಇದನ್ನು ಸಿಬಿಐ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ನ ವಿವಾದಿತ ನಾಯಕ ದಿಗ್ವಿಜಯ್ ಸಿಂಗ್ ಒತ್ತಾಯಿಸಿದ್ದಾರೆ.
ಮಧ್ಯಪ್ರದೇಶದ ಬಿಜೆಪಿ ಸರಕಾರವು ಜೋಷಿ ಹತ್ಯಾ ಪ್ರಕರಣವನ್ನು ಮುಚ್ಚಿ ಹಾಕಿತ್ತು. ಆದರೆ ಇದನ್ನು ನಂತರ ರಾಜಸ್ತಾನ ಎಟಿಎಸ್ ಮತ್ತು ರಾಷ್ಟ್ರೀಯ ತನಿಖಾ ದಳ (ಎನ್ಐಎ) ನಡೆಸಿತ್ತು ಎಂದು ಆರೋಪಿಸಿರುವ ದಿಗ್ವಿಜಯ್, ಈ ಹತ್ಯಾ ಪ್ರಕರಣದಲ್ಲಿ ಕೇಳಿ ಬಂದಿರುವ ಎಲ್ಲಾ ಹೆಸರುಗಳು ಒಂದಲ್ಲ ಒಂದು ಬಾರಿ ಆರೆಸ್ಸೆಸ್ ಜತೆ ಗುರುತಿಸಿಕೊಂಡು ಬಂದಿರುವಂತವುಗಳು. ಇವರೆಲ್ಲರೂ ಆರೆಸ್ಸೆಸ್ ಸ್ವಯಂಸೇವಕರು ಎಂದರು.
ತನ್ನ ಸ್ವಂತ ಪ್ರಚಾರಕನನ್ನೇ ಕ್ಷಮಿಸಲು ಸಿದ್ಧವಿಲ್ಲದ ಆರೆಸ್ಸೆಸ್, ಇತರರನ್ನು ಏನು ಮಾಡುತ್ತದೆ ಎಂದು ಪ್ರಶ್ನಿಸಿರುವ ಅವರು, ಇಲ್ಲಿ ವಿಸ್ತೃತ ತನಿಖೆಯ ಅಗತ್ಯವಿದೆ ಎಂಬುದನ್ನು ಒತ್ತಿ ಹೇಳಿದರು.
ಜೋಷಿ ಬಾಂಬ್ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದರು. ಅವರು ಅಜ್ಮೀರ್ ಸ್ಫೋಟ, ಸಮಜೋತಾ ಎಕ್ಸ್ಪ್ರೆಸ್ ಸ್ಫೋಟ, ಕಾಂಗ್ರೆಸ್ ನಾಯಕನೊಬ್ಬನ ಹತ್ಯೆ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿದ್ದವರು. ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಸಾಕಷ್ಟು ಬೇಡಿಕೆಯಿಟ್ಟರೂ ಮಧ್ಯಪ್ರದೇಶ ನೀಡಿಲ್ಲ. ಹಾಗಾಗಿ ಕೇಂದ್ರ ಸರಕಾರವೇ ಮುಂದಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.