ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ವಿಚಾರಗಳಲ್ಲಿ ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ, ಕೊಳಕು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ನಿಜವಾಗಿಯೂ ಕಾಂಗ್ರೆಸ್ಗೆ ದಮ್ಮಿದ್ದರೆ ಸ್ವಿಸ್ ಬ್ಯಾಂಕುಗಳಲ್ಲಿರುವ ಭಾರತೀಯರ ಕಪ್ಪು ಹಣವನ್ನು ವಾಪಸ್ ತನ್ನಿ ಎಂದು ಸವಾಲು ಹಾಕಿದರು.
ಕಚ್ ಜಿಲ್ಲೆಯ ಗಾಂಧಿಧಾಮ ನಗರದಲ್ಲಿ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ದೆಹಲಿಯಲ್ಲಿನ ಕಾಂಗ್ರೆಸ್ ಸುಲ್ತಾನರು ಕೊಳಕು ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ಮುಂತಾದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿರುವ ಸರಕಾರ, ಆತ್ಮಾವಲೋಕನ ಮಾಡಿಕೊಳ್ಳುವ ಬದಲು ಇತರರ ಮೇಲೆ ಆರೋಪಗಳನ್ನು ಮಾಡುತ್ತಿದೆ ಎಂದರು.
ಭ್ರಷ್ಟಾಚಾರ, ಅಕ್ರಮಗಳ ಬಗ್ಗೆ ದೆಹಲಿಯಲ್ಲಿ ದೊಡ್ಡ ದೊಡ್ಡ ಭಾಷಣಗಳನ್ನು ಬಿಗಿಯುತ್ತಾರೆ. ನೀವು ನಿಜಕ್ಕೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಧೈರ್ಯ ಹೊಂದಿದ್ದರೆ, ಆ ಕುರಿತು ಗಂಭೀರವಾಗಿದ್ದರೆ, ಸ್ವಿಸ್ ಬ್ಯಾಂಕುಗಳಲ್ಲಿ ಬಿದ್ದಿರುವ ಕಪ್ಪು ಹಣವನ್ನು ವಾಪಸ್ ತನ್ನಿ. ಇದೊಂದೇ ಹೆಜ್ಜೆ ನೀವು ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದೀರಿ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಕಾಂಗ್ರೆಸ್ನತ್ತ ಬೆಟ್ಟು ಮಾಡುತ್ತಾ ಸವಾಲೆಸೆದರು.
ಕಾಂಗ್ರೆಸ್ ಪಕ್ಷವು ಮತಬ್ಯಾಂಕ್ ರಾಜಕಾರಣದಲ್ಲಿ ಲಾಭ ಪಡೆಯುವ ಸಲುವಾಗಿ ಭಯೋತ್ಪಾದನೆಯಲ್ಲಿ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಎಂದು ವಿಭಜನೆ ಯತ್ನದಲ್ಲಿ ತೊಡಗಿದೆ ಎಂದಿರುವ ಮೋದಿ, ಪಾಕಿಸ್ತಾನವನ್ನು ಹುಟ್ಟಿಸಲು ಈ ಹಿಂದೆ ನಮ್ಮನ್ನು ಆಳಿದ ಬ್ರಿಟೀಷರು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು ಎಂಬ ಭಾಷೆಯನ್ನು ಬಳಸುತ್ತಿದ್ದರು ಎಂದು ನೆನಪಿಸಿದರು. ಅಲ್ಲದೆ, ಈಗ ದೇಶವನ್ನು ವಿಭಜಿಸುವ ಸಲುವಾಗಿ ಕಾಂಗ್ರೆಸ್ ಇಂತಹ ತಂತ್ರಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಕೋಮುವಾದ ಮತ್ತು ಭಯೋತ್ಪಾದನೆಗಳಲ್ಲಿ ತೊಡಗಿಸಿಕೊಂಡಿರುವ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಸಂಘಟನೆಗಳಿಂದ ಕಾಂಗ್ರೆಸ್ ಪಕ್ಷವು ದೂರ ಉಳಿದಿದೆ. ಅವೆಲ್ಲ ಶಕ್ತಿಗಳು ಅಪಾಯಕಾರಿಯಾದುದು ಮತ್ತು ಅದನ್ನು ಮಣಿಸಲೇಬೇಕು ಎಂದು ಕಾಂಗ್ರೆಸ್ ಅಧಿವೇಶನದಲ್ಲಿ ಸೋನಿಯಾ ಗಾಂಧಿ ಹೇಳಿದ್ದನ್ನು ಬಿಜೆಪಿಯ ಪ್ರಭಾವಿ ನಾಯಕ ಉಲ್ಲೇಖಿಸಿದರು.
ಹಾಗಿದ್ದರೆ ಪಾರ್ಸಿಗಳು, ಜೈನರು, ಬೌದ್ಧರು ಕೂಡ ಭಯೋತ್ಪಾದಕರೇ ಎಂದು ಸೋನಿಯಾಗೆ ಪ್ರಶ್ನೆ ಹಾಕಿದರು.
ಭಯೋತ್ಪಾದನೆಗೆ ಜಾತಿಯಿಲ್ಲ, ಧರ್ಮವಿಲ್ಲ ಎನ್ನುವುದು ಇಡೀ ಜಗತ್ತಿನ ಅಭಿಪ್ರಾಯ. ಆದರೆ ಕಾಂಗ್ರೆಸ್ ಪಕ್ಷವು ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರ ಭಯೋತ್ಪಾದನೆ ಎಂಬ ವ್ಯಾಖ್ಯಾನಗಳನ್ನು ಮಾಡುವ ಮೂಲಕ ದೇಶ ವಿಭಜನೆಗೆ ಯತ್ನಿಸುತ್ತಿದೆ ಎಂದು ಆರೋಪಿಸಿದರು.