ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಂದೂಗಳನ್ನು ಮುಟ್ಟಿದ್ರೆ ಜಾಗ್ರತೆ: ಸೋನಿಯಾಗೆ ಸಿಂಘಾಲ್ (VHP | Congress | Ashok Singhal | Sonia Gandhi)
Bookmark and Share Feedback Print
 
ಹಿಂದೂ ಸಂಘಟನೆಗಳ ವಿರುದ್ಧ ಮತ್ತು ಅದರ ನಾಯಕರ ವಿರುದ್ಧ ಇಲ್ಲದ ಪಿತೂರಿಗಳನ್ನು ನಡೆಸಿದರೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಆದ ಗತಿಯೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೂ ಒದಗಲಿದೆ ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಔರಂಗಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿಂಘಾಲ್, ಕಾಂಗ್ರೆಸ್ ಅಧಿನಾಯಕಿಗೆ ಬೆದರಿಕೆ ಹಾಕಿದ್ದಾರಾದರೂ, ಅದು ಯಾವ ರೀತಿಯದ್ದು ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಯಾವುದೇ ಹಿಂದೂ ನಾಯಕನನ್ನು ಮುಟ್ಟುವ ಧೈರ್ಯಕ್ಕೆ ಹೋಗಬೇಡಿ. ಹಾಗೆಲ್ಲಾದರೂ ಮಾಡಿದರೆ ನಿಮಗೆ ನಿಮ್ಮ ಅತ್ತೆ ಇಂದಿರಾ ಗಾಂಧಿಗಾದ ಗತಿಯೇ ಆಗಲಿದೆ ಎಂದು ನೇರವಾಗಿ ಸೋನಿಯಾ ಗಾಂಧಿಯನ್ನು ಉಲ್ಲೇಖಿಸಿ ಸಿಂಘಾಲ್ ಕಟ್ಟೆಚ್ಚರ ರವಾನಿಸಿದರು.

ಅಮೃತಸರದ ಸ್ವರ್ಣಮಂದಿರಕ್ಕೆ ಸೇನೆಯನ್ನು ನುಗ್ಗಿಸುವ ಮೂಲಕ ಸಿಖ್ಖರ ಭಾವನೆಗಳಿಗೆ ಧಕ್ಕೆ ಮಾಡಿದ್ದರೆಂದು ಆರೋಪಿಸಿ, ಭದ್ರತಾ ಸಿಬ್ಬಂದಿಗಳಾಗಿದ್ದ ಸಿಖ್ಖರೇ ಇಂದಿರಾ ಗಾಂಧಿಯನ್ನು ಗುಂಡಿಕ್ಕಿ ಕೊಂದಿದ್ದನ್ನು ಸ್ಮರಿಸಬಹುದಾಗಿದೆ.

ಕಾಂಗ್ರೆಸ್ ಹುಟ್ಟಿದಾಗಿನಿಂದ ಇದುವರೆಗೆ ಬೆಳೆದು ಬಂದ ಹಂತ ಹಂತಗಳನ್ನೂ ವಿಎಚ್‌ಪಿ ನಾಯಕ ಇದೇ ಸಂದರ್ಭದಲ್ಲಿ ಝಾಡಿಸಿದರು.

ಕಾಂಗ್ರೆಸ್ ಪಕ್ಷವನ್ನು ಒಬ್ಬ ವಿದೇಶಿ ಹುಟ್ಟು ಹಾಕಿದರು. ಈಗ ಅದನ್ನು ಇನ್ನೊಬ್ಬ ವಿದೇಶಿ ಮುಗಿಸುತ್ತಿದ್ದಾರೆ. ಭಾರತದಲ್ಲಿನ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಸಲುವಾಗಿ ಸೋನಿಯಾರನ್ನು ರಾಜೀವ್ ಗಾಂಧಿಗೆ ಮದುವೆ ಮಾಡಿಸಿ ಕಳುಹಿಸಲಾಗಿತ್ತು ಎಂದು ಆರೋಪಿಸಿದರು.

ಹಿಂದೂಗಳ ಭಾವನೆಗಳ ಮೇಲಿನ ದಾಳಿಯನ್ನು ಸೋನಿಯಾ ಮತ್ತು ರಾಹುಲ್ ಗಾಂಧಿ ನಿಲ್ಲಿಸದೇ ಇದ್ದಲ್ಲಿ, ರಾಷ್ಟ್ರವ್ಯಾಪಿ ಹೋರಾಟ ನಡೆಸಲಾಗುತ್ತದೆ ಎಂದಿರುವ ಸಿಂಘಾಲ್, ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಅವರನ್ನು ಸುಳ್ಳು ದಾಖಲೆಗಳ ಮೂಲಕ ಸಿಲುಕಿಸಲಾಗಿದೆ ಎಂದರು.

ಈ ದೇಶದಲ್ಲಿ ಕೇಸರಿ ಭಯೋತ್ಪಾದನೆ ಇದೆ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಆದರೆ ನಾನು ಹೇಳುತ್ತಿದ್ದೇನೆ, ಕೇಸರಿ ಬಟ್ಟೆಗಳನ್ನು ತೊಡುವುದೆಂದರೆ ಅದು ತ್ಯಾಗ, ಪ್ರೀತಿ, ಶಾಂತಿ ಮತ್ತು ಸೌಹಾರ್ದತೆಯ ಸಂಕೇತ. ಅದು ವಿಶ್ವಶಾಂತಿಯ ಧ್ಯೋತಕ. ಆ ಬಟ್ಟೆಗಳನ್ನು ಧರಿಸುವ ಪವಿತ್ರರನ್ನು ಅಪಮಾನಿಸಲಾಗುತ್ತಿರುವುದನ್ನು ಕೇಳಲು ತುಂಬಾ ನೋವಾಗುತ್ತಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ