ಕಾಂಗ್ರೆಸ್ಸಿಗ ಕಲ್ಮಾಡಿಗೆ ತಿಹಾರ್ ಜೈಲೇ ಸೂಕ್ತ ಜಾಗ: ಬಿಜೆಪಿ
ನವದೆಹಲಿ, ಶುಕ್ರವಾರ, 7 ಜನವರಿ 2011( 12:28 IST )
ಸಿಬಿಐಯಿಂದ ಸತತ ಒಂಬತ್ತು ಗಂಟೆಗಳ ಕಾಲ ವಿಚಾರಣೆಗೊಳಗಾದ ಕಾಮನ್ವೆಲ್ತ್ ಗೇಮ್ಸ್ ಸಂಘಟನಾ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿಗೆ ಅತಿಥಿ ಸತ್ಕಾರ ಮಾಡುವುದನ್ನು ಕಾಂಗ್ರೆಸ್ ನಿಲ್ಲಿಸಬೇಕು ಎಂದು ಆಗ್ರಹಿಸಿರುವ ಬಿಜೆಪಿ, ಗೇಮ್ಸ್ ಯೋಜನೆಗಳ ನಿಧಿ ನುಂಗಿರುವ ಅವರು ಇರಬೇಕಾದ ನಿಜವಾದ ಜಾಗ ತಿಹಾರ್ ಜೈಲು ಎಂದಿದೆ.
ಕಲ್ಮಾಡಿಯನ್ನು ಅತಿಥಿಯಂತೆ ನೋಡಿಕೊಳ್ಳುವುದನ್ನು ಸಿಬಿಐ ನಿಲ್ಲಿಸಬೇಕು. ಸಂಘಟನಾ ಸಮಿತಿಯ ಹಿರಿಯ ಅಧಿಕಾರಿಗಳಾದ ಸಂಜಯ್ ಮಹೀಂದ್ರೂ ಮತ್ತು ಟಿ.ಎಸ್. ದರ್ಬಾರಿ (ಜೈಲಿನಲ್ಲಿದ್ದಾರೆ) ಜತೆ ಅವರೂ ಜೈಲಿನಲ್ಲಿರಬೇಕು ಎಂದು ಬಿಜೆಪಿ ವಕ್ತಾರ ಶಹ್ನಾವಾಜ್ ಹುಸೇನ್ ಅಭಿಪ್ರಾಯಪಟ್ಟರು.
PTI
ಗೇಮ್ಸ್ ಅವ್ಯವಹಾರ ಸಂಬಂಧ ಸಿಬಿಐ ಮೊನ್ನೆಯಷ್ಟೇ ಕಾಂಗ್ರೆಸ್ ಸಂಸದ ಕಲ್ಮಾಡಿಯವರನ್ನು ಸುಮಾರು ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.
ಕಾಮನ್ವೆಲ್ತ್ ಗೇಮ್ಸ್ ಪೂರ್ವ ಸಿದ್ಧತೆಯ ಯಾವುದೇ ಯೋಜನೆ ಕಲ್ಮಾಡಿಯ ಸಮ್ಮತಿಯಿಲ್ಲದೆ ನಡೆದಿಲ್ಲ, ಅವರ ಮೂಗಿನ ನೇರಕ್ಕೆ ನಡೆದಿದೆ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತು. ಅವರು ಇರಬೇಕಾದ ನಿಜವಾದ ಜಾಗ ಪಶ್ಚಿಮ ದೆಹಲಿಯ ಜನಪ್ರಿಯ ತಾಣ ತಿಹಾರ ಜೈಲು ಎಂದರು.
ಕಾಮನ್ವೆಲ್ತ್ ಗೇಮ್ಸ್ ಹಗರಣದ ಪ್ರಮುಖ ರೂವಾರಿ ಕಲ್ಮಾಡಿಯಾಗಿದ್ದರೂ, ಇದುವರೆಗೂ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ದಾಖಲಾಗಿರುವ ನಾಲ್ಕು ಎಫ್ಐಆರ್ಗಳಲ್ಲಿ ಕಲ್ಮಾಡಿಯವರನ್ನು ಹೆಸರಿಸಿಲ್ಲ. ಕಾಂಗ್ರೆಸ್ ಒತ್ತಡದ ಹಿನ್ನೆಲೆಯಲ್ಲಿ ಸಿಬಿಐ ಈ ರೀತಿಯಾಗಿ ನಡೆದುಕೊಂಡಿದೆ ಎಂದು ಆರೋಪಿಸಲಾಗುತ್ತಿದೆ.
ಕಲ್ಮಾಡಿಯವರ ಅಡಿಯಲ್ಲಿನ ಅಧಿಕಾರಿಗಳನ್ನು ಬಂಧಿಸಲಾಗಿದೆ. ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಸ್ವತಃ ಕಲ್ಮಾಡಿಯ ನಿವಾಸಗಳಿಗೆ ದಾಳಿ ನಡೆಸಲಾಗಿದೆ. ಎರಡು ದಿನಗಳ ಹಿಂದಷ್ಟೇ ವಿಚಾರಣೆಯನ್ನೂ ಸಿಬಿಐ ಪೂರೈಸಿದೆ. ಆದರೂ ಕಲ್ಮಾಡಿ ವಿರುದ್ಧ ಪ್ರಕರಣ ದಾಖಲಾಗದೇ ಇರುವುದು ಹಲವು ಶಂಕೆಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಹಿಂದೆ ಹಲವು ಹಗರಣಗಳಲ್ಲಿ ಪಾರಾಗಿರುವಂತೆ ಕಲ್ಮಾಡಿಯೂ ತಪ್ಪಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.