ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಿಂಡನಿಗಾಗಿ ಗಂಡನನ್ನು ಕೊಂದು ಗೋಡೆ ಕಟ್ಟಿದ ಸಾವಿತ್ರಿ (Jaipur | Savitri | Kaluram Prajapat | Mangal Ram)
Bookmark and Share Feedback Print
 
ಯಮರಾಜನ ಜತೆ ವಾಗ್ಯುದ್ಧ ಮಾಡಿ ಗಂಡ ಸತ್ಯವಾನ್ ಪ್ರಾಣವನ್ನು ಮರಳಿ ಪಡೆದು ಸತಿಶ್ರೇಷ್ಠಳೆನಿಸಿಕೊಂಡ ಸತಿ ಸಾವಿತ್ರಿ ಈಕೆಯಲ್ಲ. ಈಕೆ ತನ್ನ ಮಿಂಡನಿಗಾಗಿ ಗಂಡನನ್ನು ಗುದ್ದಲಿಯಿಂದ ಹೊಡೆದು, ಸಾಯುವವರೆಗೆ ಕತ್ತನ್ನು ಒತ್ತಿ ಹಿಡಿದು ಶವವನ್ನು ಮನೆಯೊಳಗೆ ಹೂತು ಹಾಕಿದವಳು. ಬಳಿಕ ಅದರ ಮೇಲೆಯೇ ಗೋಡೆ ಕಟ್ಟಿ ಸಿಮೆಂಟ್ ಹಾಕಿದವಳು!

ಇದು ನಡೆದಿರುವುದು ರಾಜಸ್ತಾನ ರಾಜಧಾನಿ ಜೈಪುರದ ಚೋಮು ನಗರದ ಹೊರವಲಯದಲ್ಲಿನ ರಾಮಪುರ ಗ್ರಾಮದಲ್ಲಿ. ಬಲಿಯಾದ ಬಡಪಾಯಿ 40ರ ಹರೆಯದ ಕಲುರಾಮ್ ಪ್ರಜಾಪತ್. ಕೊಂದಾಕೆ 38ರ ಸಾವಿತ್ರಿ. ಇದಕ್ಕೆ ಸಹಕಾರ ನೀಡಿದವನು ಸಾವಿತ್ರಿಯ ಪ್ರೇಮಿ ಮಂಗಲ್ ರಾಮ್.

ಅಕ್ರಮ ಸಂಬಂಧವೇ ಕಾರಣ...
ತನ್ನ ಗಂಡನನ್ನು ಗುದ್ದಲಿಯಿಂದ ಕೊಂದು ಹಾಕಲು ಕಾರಣ ಆಕೆಗಿದ್ದ ಅಕ್ರಮ ಸಂಬಂಧ. ಅದೇ ಗ್ರಾಮದ ಮಂಗಲ್ ರಾಮ್ ಎಂಬಾತನ ಜತೆ ಅನೈತಿಕ ಸಂಬಂಧ ಹೊಂದಿದ್ದ ಸಾವಿತ್ರಿಯ ಜತೆ ಪ್ರಜಾಪತ್ ಪ್ರತಿದಿನ ಜಗಳ ಮಾಡುತ್ತಿದ್ದ.

ನೆರೆ ಮನೆಗಳವರ ಪ್ರಕಾರ ಅವರದ್ದು ನಿತ್ಯ ಸುಪ್ರಭಾತದ ಮನೆ. ಹೊಡೆದಾಟ ಬಡಿದಾಟ ಸಾಮಾನ್ಯವಾಗಿತ್ತು. ಇದರಿಂದ ರೋಸಿ ಹೋಗಿದ್ದ ಸಾವಿತ್ರಿ, ತನ್ನ ಪ್ರಿಯತಮನ ಸಹಕಾರದೊಂದಿಗೆ ಮುಗಿಸುವ ನಿರ್ಧಾರಕ್ಕೆ ಬಂದಿದ್ದಳು.

ಗೋಡೆ ಕಟ್ಟಿ ಸಿಮೆಂಟ್ ಹಾಕಿದಳು...
ಇದು ಪೂರ್ವನಿಯೋಜಿತ ಕೊಲೆ. ತನ್ನ ಪ್ರಿಯತಮನ ಬಗ್ಗೆ ದಿನಾ ತಕರಾರು ತೆಗೆಯುತ್ತಿರುವ ಗಂಡನನ್ನು ಮುಗಿಸಬೇಕೆಂದು ಯೋಜನೆ ರೂಪಿಸಿ, ರಾತ್ರಿ ಗುದ್ದಲಿಯಿಂದ ಹೊಡೆಯಲಾಗಿತ್ತು. ಬಳಿಕ ಆತ ಕೊನೆ ಉಸಿರು ಎಳೆಯುವವರೆಗೂ ಗಂಟಲನ್ನು ಸಾವಿತ್ರಿ ಒತ್ತಿ ಹಿಡಿದಿದ್ದಳು.

ಇಬ್ಬರೂ ಸೇರಿ ಶವವನ್ನು ಗೋಣಿ ಚೀಲವೊಂದರಲ್ಲಿ ತುಂಬಿಸಿ ಮನೆಯೊಳಗೆ ಒಂದು ಕಡೆ ಹೂತು ಹಾಕಿದರು. ಅಷ್ಟಕ್ಕೆ ಬಿಡದೆ ಅದರ ಮೇಲೆ ಗೋಡೆಯೊಂದನ್ನು ಕಟ್ಟಿದರು. ಇದಿಷ್ಟು ನಡೆದದ್ದು ಜನವರಿ ಐದರಂದು.

ಮರುದಿನ ಸಂಶಯ ಬರಬಾರದು ಎಂಬ ನಿಟ್ಟಿನಲ್ಲಿ ಗೋಡೆಯ ಮೇಲೆ ಸಿಮೆಂಟ್ ಹಾಕಿ ಭದ್ರಪಡಿಸಿದ ಸಾವಿತ್ರಿ, ಪಕ್ಕದ ಮನೆಯವರ ಜತೆ ನಾಟಕ ಮಾಡಿದ್ದಳು. ನಾನು ಕೆಲಸಕ್ಕೆ ಹೋಗಿದ್ದೆ, ಗಂಡ ಇನ್ನೂ ಬಂದೇ ಇಲ್ಲವೆಂಬಂತೆ ವರ್ತಿಸಿದಳು.

ತಪ್ಪು ಮಾಡೇ ಬಿಟ್ಟಿದ್ದಳು...
ಕೊಲೆ ಮಾಡಿದ ನಂತರವೂ ಸಾಕಷ್ಟು ಜಾಗರೂಕತೆ ವಹಿಸಿದ್ದ ಸಾವಿತ್ರಿ, ಯಾವುದೇ ಹಂತದಲ್ಲಿ ಅದು ಹೊರಗೆ ಬರದಂತೆ ನೋಡಿಕೊಂಡಿದ್ದಳು. ಆದರೆ ಅದ್ಯಾವ ಹಂತದಲ್ಲಿ ಭಾವುಕಳಾದಳೋ? ನೇರವಾಗಿ ತನ್ನ ಸಹೋದರನ ಮನೆಗೆ ಹೋಗಿ, ಘಟನೆಯನ್ನು ವಿವರಿಸಿದ್ದಳು. ಗಂಡನನ್ನು ನಾನೇ ಕೊಂದು ಹಾಕಿದ್ದೇನೆ ಎಂದು ಬಹಿರಂಗಪಡಿಸಿದಳು.

ಇಷ್ಟಕ್ಕೆ ನಿಲ್ಲದ ಸಾವಿತ್ರಿ, ಪಕ್ಕದ ಮನೆಯ ಕೆಲವು ಆಪ್ತ ಮಹಿಳೆಯರ ಜತೆಗೂ ಮಾಹಿತಿ ಹಂಚಿಕೊಂಡಳು. ನಾನೇ ಗಂಡನನ್ನು ಕೊಂದು ಹಾಕಿದ್ದೇನೆ. ಆತ ಅಸಹಜ ಲೈಂಗಿಕ ಕ್ರಿಯೆಗೆ ನನ್ನನ್ನು ಒಳಪಡಿಸುತ್ತಿದ್ದ. ಬೇಡವೆಂದರೂ ಕೇಳದೆ ಅನೈಸರ್ಗಿಕತೆಗೆ ಒಗ್ಗಿಕೊಂಡಿದ್ದ. ಇದನ್ನು ಸಹಿಸಿ ನನಗೆ ಸಾಕಾಗಿ ಹೋಗಿತ್ತು. ಹಾಗಾಗಿ ಕೊಂದೆ ಎಂದು ಹೇಳಿಕೊಂಡಳು.

ಸಾವಿತ್ರಿಯ ಘನಾಂಧಾರಿ ಕಾರ್ಯವನ್ನು ಕೇಳಿ ಬೆಚ್ಚಿ ಸಹೋದರ ಮತ್ತು ಇತರರು ದಾರಿ ತೋಚದೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದುವರೆಗೂ ಪ್ರಿಯಮತನ ಕುರಿತು ಯಾರಲ್ಲೂ ಬಾಯಿ ಬಿಡದೇ ಇದ್ದ ಸಾವಿತ್ರಿ, ಪೊಲೀಸರ ಆತಿಥ್ಯ ಸ್ವೀಕರಿಸುತ್ತಿದ್ದಂತೆ ಮಂಗಲ್ ಪಾಂಡೆ ಹೆಸರನ್ನು ಹೇಳಿದ್ದಾಳೆ.

ಈಗ ಇಬ್ಬರೂ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಬಡಪಾಯಿ ಗಂಡನ ಕಳೇಬರವನ್ನು ಗೋಡೆ ಒಡೆದು ಹೊರ ತೆಗೆಯಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ