ಮನೆಯಲ್ಲಿದ್ದ ಇಬ್ಬರು ಸಹೋದರಿಯರನ್ನು ಹೊರಗೆ ಎಳೆದ ಲಷ್ಕರ್ ಎ ತೊಯ್ಬಾದ ಉಗ್ರಗಾಮಿಗಳು, ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೂಪುರ್ ಪಟ್ಟಣದಲ್ಲಿ ನಡೆದಿದೆ. ಭಯೋತ್ಪಾದಕರಿಂದ ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ನಾಗರಿಕರ ಮೇಲಿನ ದಾಳಿಗಳಲ್ಲಿ, ಈ ವರ್ಷದ ಪ್ರಥಮ ಘಟನೆ ಇದಾಗಿದೆ.
ಗುಲಾಂ ನಬಿ ದರ್ ಅವರ ಪುತ್ರಿಯರಾದ ಆರಿಫಾ ಮತ್ತು ಅಕ್ತರ್ ಸೋಮವಾರ ರಾತ್ರಿ ಹತ್ತರ ಅವಧಿಗೆ, ಒಬ್ಬ ಪಾಕಿಸ್ತಾನಿ ಸೇರಿದಂತೆ ಮೂವರು ಉಗ್ರರಿಂದ ಹತರಾಗಿದ್ದಾರೆ. ಶ್ರೀನಗರದಿಂದ 52 ಕಿ.ಮೀ ದೂರದಲ್ಲಿರುವ ಸೂಪುರದ ಮುಸ್ಲಿ ಪೀರ್ನಲ್ಲಿ ಈ ಘಟನೆ ನಡೆದಿದೆ ಎಂದು ಸೂಪುರ್ ಪೊಲೀಸ್ ಸುಪರಿಂಟೆಂಡೆಂಟ್ ಅಲ್ತಾಫ್ ಅಹಮದ್ ತಿಳಿಸಿದ್ದಾರೆ.
ಏಕಾಏಕಿ ಮನೆಯೊಳಗೆ ನುಗ್ಗಿದ ಲಷ್ಕರ್ ಉಗ್ರರು ಸುಮಾರು 16 ರಿಂದ 18 ವರ್ಷದೊಳಗಿನ ಯುವತಿಯರನ್ನು ಬಲತ್ಕಾರವಾಗಿ ಹೊರಗೆಳೆದಿದ್ದಾರೆ.
ನಂತರ ರಹೀಂ ಸಾಹಿಬ್ ಪ್ರಾರ್ಥನಾ ಮಂದಿರದ ಬಳಿ ಇಬ್ಬರಿಗೂ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇವರಲ್ಲಿ ಒಬ್ಬರ ಎಡಗಣ್ಣಿಗೆ ಗುಂಡು ಹಾರಿಸಲಾಗಿದ್ದು, ಮೃತದೇಹಗಳು ಇವರ ಮನೆಯ ಸಮೀಪ ಪತ್ತೆಯಾಗಿದ್ದವು.
ಉಗ್ರಗಾಮಿಗಳು ಈ ಸಹೋದರಿಯರನ್ನೇ ಗುರಿಯಾಗಿಸಿಕೊಂಡರೇಕೆಂಬುದು ತಕ್ಷಣಕ್ಕೆ ತಿಳಿದಿಲ್ಲ.
ಹಂತಕರ ತಂಡದಲ್ಲಿದ್ದ ಸ್ಥಳೀಯ ಉಗ್ರರನ್ನು ವಾಸಿಂ ಗನಯಿ ಮತ್ತು ಮುಜಾಫರ್ ನಾಯ್ಕೂ ಎಂದು ಗುರುತಿಸಲಾಗಿದೆ. ಈ ಉಗ್ರರಿಬ್ಬರು ಹಿಂದಿನಿಂದಲೇ ಪೊಲೀಸರಿಗೆ ಬೇಕಾದವರಾಗಿದ್ದು, ಅವರನ್ನು ಹುಡುಕಿಕೊಟ್ಟವರಿಗೆ ನಗದು ಬಹುಮಾನವನ್ನೂ ಘೋಷಿಸಲಾಗಿತ್ತು.