ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಮಿಳುನಾಡಿಗೆ ಮತ್ತೆ ನಾನೇ ಮುಖ್ಯಮಂತ್ರಿ: ಕರುಣಾನಿಧಿ (I will continue as CM of TN for next term)
ಉತ್ತರಾಧಿಕಾರಕ್ಕಾಗಿ ಕಿತ್ತಾಡುತ್ತಿರುವ ಮಕ್ಕಳನ್ನು ಸಮಾಧಾನಗೊಳಿಸಲು ವಿಫಲವಾಗಿರುವ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ, ಮುಂದಿನ ಐದು ವರ್ಷಗಳ ಕಾಲ ತಾನೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದೇನೆ ಎಂದು ಹೇಳುವ ಮೂಲಕ ನಿವೃತ್ತಿ ಯೋಜನೆಗಳನ್ನು ಬದಿಗೊತ್ತಿರುವ ಸಂದೇಶಗಳನ್ನು ರವಾನಿಸಿದ್ದಾರೆ.

ಮುಂದಿನ ಆರು ವರ್ಷಗಳ ಅವಧಿಯಲ್ಲಿ ತಮಿಳುನಾಡಿನ ಎಲ್ಲಾ ಗುಡಿಸಲುಗಳನ್ನು ಕಾಂಕ್ರೀಟ್ ಮನೆಗಳನ್ನಾಗಿ ಪರಿವರ್ತನೆ ಮಾಡಲಾಗುತ್ತದೆ. ನಾನು ಅಲ್ಲೇ (ಮುಖ್ಯಮಂತ್ರಿ ಕಚೇರಿಯಲ್ಲಿ) ಇರಲಿದ್ದೇನಾ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ, ಹೌದು; ನಾನು ಮತ್ತು ಡಿಎಂಕೆ ಆಡಳಿತವು ಮುಂದುವರಿಯಲಿದೆ ಎಂದು ಜಯಲಲಿತಾ ಅವರ ಎಐಎಡಿಎಂಕೆ ತೊರೆದು ಡಿಎಂಕೆಗೆ ಸೇರ್ಪಡೆಗೊಂಡ ಮುಖಂಡರೊಬ್ಬರನ್ನು ಸ್ವಾಗತಿಸುತ್ತಾ ತಿಳಿಸಿದರು.

ಕಲೈಂಜ್ಞಾರ್ ವಸತಿ ಯೋಜನೆಯನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ರಾಜ್ಯದ ಗ್ರಾಮಾಂತರ ಪ್ರದೇಶಗಳು ಮತ್ತು ಪಟ್ಟಣಗಳ ಎಲ್ಲಾ ಗುಡಿಸಲುಗಳನ್ನು ಕಾಂಕ್ರೀಟೀಕರಣಕ್ಕೊಳಪಡಿಸುವ ಭರವಸೆ ನೀಡಿದರು. ಈ ಹಿಂದೆ ಪ್ರತಿ ಮನೆಗೂ ಕಲರ್ ಟಿವಿ, ಬಡವರಿಗೆ ಅಕ್ಕಿ ಮುಂತಾದ ಜನಪರ ಯೋಜನೆಗಳನ್ನು ಪ್ರಕಟಿಸಿ, ಜಾರಿಗೆ ತಂದಿರುವುದನ್ನು ಇದೇ ಸಂದರ್ಭದಲ್ಲಿ ಅವರು ನೆನಪಿಸಿದರು.

ಕರುಣಾನಿಧಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸ್ವತಃ ಅವರ ಪುತ್ರ ಮತ್ತು ಉಪ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ ಉಲ್ಲೇಖಿಸಿದರು. ಮುಂಬರುವ ಚುನಾವಣೆಯಲ್ಲಿ ಡಿಎಂಕೆ ಜಯಭೇರಿ ಬಾರಿಸಲಿದೆ ಎಂದರು.

ಅತ್ತ ಮಧುರೆಯಲ್ಲಿ ಸಾರ್ವಜನಿಕ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಕೂಡ ಇದೇ ಮಾತನ್ನು ಹೇಳಿದ್ದಾರೆ. ಕರುಣಾನಿಧಿಯವರ ಜನೋಪಯೋಗಿ ಕಾರ್ಯಗಳಿಂದಾಗಿ ಅವರನ್ನೇ ಮತ್ತೆ ಮುಖ್ಯಮಂತ್ರಿಯನ್ನಾಗಿ ಜನತೆ ಆಯ್ಕೆ ಮಾಡಲಿದ್ದಾರೆ ಎಂದಿದ್ದಾರೆ.

ಅವರ ಯೋಜನೆಗಳಿಗಾಗಿ ಕೇವಲ ಆರನೇ ಬಾರಿ ಮಾತ್ರವಲ್ಲ, ಏಳನೇ ಬಾರಿಯೂ ಮುಖ್ಯಮಂತ್ರಿಯನ್ನಾಗಿ ಜನ ಆರಿಸುತ್ತಾರೆ ಎಂಬ ಭರವಸೆಯಿದೆ ಎಂದರು.

ತಾನು ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗಲು ಬಯಸುತ್ತಿದ್ದೇನೆ ಎಂದು ಕಳೆದೆರಡು ವರ್ಷಗಳಲ್ಲಿ ಹಲವು ಸಮಾರಂಭಗಳಲ್ಲಿ ಕರುಣಾನಿಧಿ ಹೇಳಿಕೊಂಡು ಬಂದಿದ್ದಾರೆ. ಆದರೆ ಅವರ ನಂತರ ಡಿಎಂಕೆ ಉತ್ತರಾಧಿಕಾರಿ ಯಾರು ಎಂಬ ಕುರಿತು ಸ್ಟಾಲಿನ್ ಮತ್ತು ಅಳಗಿರಿಯವರದ್ದು ಭಿನ್ನ ಅಭಿಪ್ರಾಯ. ಸ್ಟಾಲಿನ್ ಉತ್ತರಾಧಿಕಾರಿಯಾಗುವುದು ಅಳಗಿರಿಗೆ ಇಷ್ಟವಿಲ್ಲ.

ಕಳೆದ ತಿಂಗಳಷ್ಟೇ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದ ಕರುಣಾನಿಧಿ, ತಾನು ಮುಖ್ಯಮಂತ್ರಿಯಾಗುವ ಬದಲು ಪಕ್ಷದ ಕಚೇರಿಯಲ್ಲಿ ಕುಳಿತುಕೊಳ್ಳಲು ಬಯಸುತ್ತೇನೆ ಎಂದಿದ್ದರು. ಆದರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜನರಲ್ಲಿ ಗೊಂದಲ ಸೃಷ್ಟಿಸಬಾರದು ಎಂಬ ಕಾರಣಕ್ಕೆ ಹಿಂದಿನ ಹೇಳಿಕೆಗಳನ್ನು ತಳ್ಳಿ ಹಾಕಿದ್ದಾರೆ. ತಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇವನ್ನೂ ಓದಿ