ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗುಜರಾತ್ ಮೇಲೆ ಐಟಿ ಕೆಂಗಣ್ಣು; ಪ್ರಧಾನಿಗೆ ಮೋದಿ ದೂರು
(Gujarat | Narendra Modi | Manmohan Singh | Vibrant Gujarat Summit)
ಗುಜರಾತ್ ಮೇಲೆ ಐಟಿ ಕೆಂಗಣ್ಣು; ಪ್ರಧಾನಿಗೆ ಮೋದಿ ದೂರು
ಅಹಮದಾಬಾದ್, ಶನಿವಾರ, 26 ಮಾರ್ಚ್ 2011( 18:23 IST )
ಗುಜರಾತಿನಲ್ಲಿ ಉದ್ಯಮ ಸಮ್ಮೇಳನ ನಡೆಸಿದ್ದಕ್ಕೆ ಪ್ರತಿಯಾಗಿ ಆದಾಯ ತೆರಿಗೆ ಇಲಾಖೆಯು ನೋಟೀಸ್ ನೀಡಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಮುಖ್ಯಮಂತ್ರಿ ನರೇಂದ್ರ ಮೋದಿ, ಈ ಬಗ್ಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ದೂರು ನೀಡಿದರು.
ಗುಜರಾತಿನಲ್ಲಿ ನಡೆದಿದ್ದ 'ವೈಬ್ರಂತ್ ಗುಜರಾತ್ ಶೃಂಗ'ಗಳಲ್ಲಿ ಬಂಡವಾಳ ಹೂಡಿಕೆಗೆ ಸಂಬಂಧಪಟ್ಟಂತೆ ಮಾಡಿಕೊಳ್ಳಲಾಗಿರುವ ಎಲ್ಲಾ ಒಪ್ಪಂದಗಳ ವಿವರಗಳನ್ನು ನೀಡುವಂತೆ ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಿರುವುದನ್ನು ಮೋದಿ ಪ್ರಧಾನಿಯವರಲ್ಲಿ ಪ್ರತಿಭಟಿಸಿದರು.
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಐಐಎಂ ಅಹಮದಾಬಾದ್ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಿಚಾರವನ್ನು ಅವರಲ್ಲಿ ಪ್ರಸ್ತಾಪಿಸಿದ ಮೋದಿ, ಐಟಿ ನೋಟೀಸಿಗೆ ಪ್ರತಿಭಟನೆ ವ್ಯಕ್ತಪಡಿಸಿದರು ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ಹೇಳಿವೆ.
ಹೀಗಾಗಬಾರದಿತ್ತು ಎಂದು ಪ್ರಧಾನ ಮಂತ್ರಿ ಅಭಿಪ್ರಾಯಪಟ್ಟರು. ಈ ವಿಚಾರದ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದರು. ಈ ಮಾತುಕತೆಯು ಪೂರ್ವ ನಿಗದಿಯಾಗಿರಲಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವರ್ಷದ ಜನವರಿ 12-13ರಂದು ಗುಜರಾತಿನಲ್ಲಿ ನಡೆದಿದ್ದ ಈ ಬಂಡವಾಳ ಸಮ್ಮೇಳನದಲ್ಲಿ 20.83 ಲಕ್ಷ ಕೋಟಿ ರೂಪಾಯಿ ಮೊತ್ತದ 7,0936 ಒಡಂಬಡಿಕೆಗಳಿಗೆ ನೂರಾರು ಕಂಪನಿಗಳು ಸಹಿ ಹಾಕಿದ್ದವು.
'ವೈಬ್ರಂತ್ ಗುಜರಾತ್ ಶೃಂಗ-2011'ರ ಕುರಿತ ತನಿಖೆ ಬಾಕಿ ಉಳಿದಿದೆ ಮತ್ತು ಗುಜರಾತ್ ಸರಕಾರದ ಜತೆ ಹಲವು ಕಾರ್ಪೊರೇಟ್ ಸಂಸ್ಥೆಗಳು ಮಾಡಿಕೊಂಡಿರುವ ಒಪ್ಪಂದಗಳ ವಿವರಗಳ ಕುರಿತು ಪರಿಶೀಲನೆ ನಡೆಸುವ ಅಗತ್ಯವಿದೆ. ಉದ್ಯಮ ಒಪ್ಪಂದಗಳ ಕುರಿತು ಆದಾಯ ತೆರಿಗೆ ಇಲಾಖೆ ಕಾಯ್ದೆ 131(1ಎ) ಅಡಿಯಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ತನ್ನ ನೋಟೀಸಿನಲ್ಲಿ ಹೇಳಿತ್ತು.