ಅಯೋಧ್ಯೆ ರಾಮ ಜನ್ಮಭೂಮಿ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೊರೆ ಹೋಗುವ ಬಗ್ಗೆ ದೇಣಿಗೆ ನೀಡುವಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮುಸ್ಲಿಂ ಸಮುದಾಯಕ್ಕೆ ವಿನಂತಿಸಿದೆ.
1993ರಿಂದಲೂ ಅಯೋಧ್ಯೆ ವಿವಾದ ಕುರಿತು ನ್ಯಾಯಾಲಯದಲ್ಲಿ ವಾದಿಸುತ್ತಿರುವ ಮಂಡಳಿಯಲ್ಲಿ ಹಣಕಾಸಿನ ಕೊರತೆ ಇರುವುದರಿಂದ ಸಮುದಾಯದವರು ಧನ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದೆ.
ಅಯೋಧ್ಯೆ ವಿವಾದ ಕುರಿತ ಕಾನೂನು ಹೋರಾಟಕ್ಕೆ ಹೆಚ್ಚಿನ ಹಣ ವೆಚ್ಛವಾಗಲಿರುವ ಹಿನ್ನೆಲೆಯಲ್ಲಿ ಮಂಡಳಿ ಪ್ರತ್ಯೇಕವಾಗಿ ಹಣವನ್ನು ಕಾಯ್ದಿರಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಈ ಬಗ್ಗೆ ವಾದಿಸುವ ವಕೀಲರಿಗೆ ಹೆಚ್ಚಿನ ಮೊತ್ತದ ಹಣ ಪಾವತಿಸಬೇಕಾಗಿದೆ. ಹಾಗಾಗಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿ, ವಾದಿಸಲು ಹೆಚ್ಚಿನ ಹಣಕಾಸಿನ ಅಗತ್ಯವಿದೆ ಎಂದು ಹೇಳಿದೆ.
ಈ ಕುರಿತು ಮಾಹಿತಿ ನೀಡಿರುವ ಮಂಡಳಿಯ ವಕೀಲ ಜಾಫರ್ಯಾಬ್ ಜಿಲಾನಿ, ಅಯೋಧ್ಯೆ ವಿವಾದ ಕುರಿತು ಅಲಹಾಬಾದ್ ಹೈಕೋರ್ಟ್ 2010ರ ಅಕ್ಟೋಬರ್ 16 ರಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ಮಂಡಳಿಯ 51ಸದಸ್ಯರ ಕಾರ್ಯ ಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು ಎಂದು ತಿಳಿಸಿದ್ದಾರೆ.
ನಿಧಿ ಸಂಗ್ರಹಿಸುವ ಕುರಿತು ಶೀಘ್ರದಲ್ಲೇ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗುತ್ತದೆ. ಅಬ್ದುಲ್ ಅಹಮದ್ ಖುರೇಶಿ ನೇತೃತ್ವದ 4ಮಂದಿ ಸದಸ್ಯರ ಸಮಿತಿಗೆ ಹಣ ಸಂಗ್ರಹಿಸುವ ಅಧಿಕಾರ ನೀಡಲಾಗುತ್ತದೆ ಎಂದು ಹೇಳಿದರು.
ಅಯೋಧ್ಯೆಯ ವಿವಾದ ಕುರಿತು ಕಳೆದ ಸೆ.30 ರಂದು ತೀರ್ಪು ನೀಡಿದ್ದ ಅಲಹಾಬಾದ್ ಹೈಕೋರ್ಟ್, ರಾಮಜನ್ಮಭೂಮಿಯ 2.77 ಎಕರೆ ಪ್ರದೇಶವನ್ನು 3 ಭಾಗಗಳಾಗಿ ವಿಂಗಡಿಸಿ ತೀರ್ಪು ನೀಡಿತ್ತು. ಈ ಜಾಗದ ಮೂರನೇ ಒಂದು ಭಾಗವನ್ನು ಸುನ್ನಿ ವಕ್ಫ್ ಬೋರ್ಡ್ಗೆ, ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಕ್ಷರ ಮಂಡಳಿಗೆ, ಮೂರನೇ ಒಂದು ಭಾಗವನ್ನು ರಾಮ ಲಲ್ಲಾ ಸಮಿತಿಗೆ ನೀಡಿತ್ತು.