ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಮಿಳುನಾಡು 'ರಾಜಕುಮಾರಿ'ಗೆ ಈಗ ಜೈಲೇ ಗತಿ (Kanimozhi arrested | lodged in 15ftx10ft cell | Tihar Jail | 2G spectrum case)
ತಮಿಳುನಾಡು 'ರಾಜಕುಮಾರಿ'ಗೆ ಈಗ ಜೈಲೇ ಗತಿ
ನವದೆಹಲಿ, ಶನಿವಾರ, 21 ಮೇ 2011( 09:29 IST )
PTI
ಚೆನ್ನೈನ ಸಿಐಟಿ ಕಾಲೋನಿಯಲ್ಲಿ ಅರಮನೆಯಂತಹ ಬಂಗ್ಲೆ, ಏರ್ ಕಂಡೀಷನ್ ಮೊದಲಾದ ಸೌಲಭ್ಯಗಳ ಮೂಲಕ ವೈಭವೋಪೇತ ಜೀವನ ನಡೆಸುತ್ತಿದ್ದ ಡಿಎಂಕೆ ಸಂಸದೆ, ಮಾಜಿ ಮುಖ್ಯಮಂತ್ರಿ ಕರುಣಾನಿಧಿಯ ಮುದ್ದಿನ ಪುತ್ರಿ ಕನಿಮೋಳಿ ಈಗ ತಿಹಾರ್ ಜೈಲಿನ 15x10 ಅಳತೆಯ ಕೊಠಡಿಯಲ್ಲಿ ವಾಸಿಸುವಂತಾಗಿದೆ. ಇದಕ್ಕೆ ಕಾರಣ 2ಜಿ ಹಗರಣ.
2ಜಿ ಹಗರಣದ ಕುರಿತು ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು ಶುಕ್ರವಾರ ಜಾಮೀನು ನಿರಾಕರಿಸಿದ್ದರಿಂದ 43 ವರ್ಷದ ಕನಿಮೋಳಿಗೆ ಜೈಲು ವಾಸ ಅನಿವಾರ್ಯವಾಯಿತು. ಆದೇಶ ಹೊರಬೀಳುತ್ತಿದ್ದಂತೆ ತಿಹಾರ್ ಜೈಲಿನ 6 ನೇ ಸಂಖ್ಯೆಯ ಕೊಠಡಿಗೆ ಕರೆದೊಯ್ಯಲಾಯಿತು. ಇದುವರೆಗೆ ಅಂಗರಕ್ಷಕರೊಂದಿಗೆ ಹೋಗುತ್ತಿದ್ದ ಆಕೆಯನ್ನು ಇಂದು ಮಹಿಳಾ ಪೇದೆಯೊಬ್ಬರು ಕೈಹಿಡಿದುಕೊಂಡು ಸೆರೆಮನೆಯೊಳಗೆ ಕರೆದುಕೊಂಡು ಹೋಗಿದ್ದು ವಿಪರ್ಯಾಸ.
ಕನಿಮೋಳಿ ಜೈಲಿನಲ್ಲಿ ಟಿವಿ, ಫ್ಯಾನ್ ಬಳಸಬಹುದು, ಪತ್ರಿಕೆಗಳನ್ನು ತರಿಸಿಕೊಂಡು ಓದಲು ಅವರಿಗೆ ಅವಕಾಶವಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಜೈಲೆಂದರೆ ಜೈಲೇ ತಾನೆ? ಎಲ್ಲವೂ ಇದ್ದರೆ ಸ್ವಾತಂತ್ರ್ಯ ಇರುವುದಿಲ್ಲ.
ಅಂದಹಾಗೆ ಕನಿಮೋಳಿಯ ಜತೆಗಿರುವ ಇತರೆ ಆರೋಪಿಗಳು ಯಾರು ಗೊತ್ತೆ? ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ಈ ಮೊದಲು ಕಾರ್ಯನಿರ್ವಹಿಸುತ್ತಿದ್ದು, ಗೂಢಚಾರಿಕೆ ಆರೋಪದ ಮೇಲೆ ಬಂಧಿತಳಾಗಿರುವ ಮಾಧುರಿ ಗುಪ್ತ, ದೆಹಲಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆಪಾದನೆಯ ಮೇಲೆ ಬಂಧಿತಳಾಗಿರುವ ಸೋನು ಪಂಜಾಬನ್, ನಗರ ಪಾಲಿಕೆ ಸದಸ್ಯರೊಬ್ಬರ ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಪಾದನೆಯ ಮೇಲೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಶಾರದಾ ಜೈನ್ ಮುಂತಾದವರು!
ಹೈಕೋರ್ಟ್ಗೆ ಮೊರೆ ಸಿಬಿಐ ಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ಕನಿಮೋಳಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಈ ಎಲ್ಲ ಪ್ರಕ್ರಿಯೆಗಳು ನಡೆಯುವವರೆಗೂ ಇಕ್ಕಟ್ಟಾದ ಜೈಲಿನ ಕೊಠಡಿಯಲ್ಲೇ ವಾಸಿಸಬೇಕು. ಅಧಿಕಾರ ಇದ್ದಾಗ ನಗುತ್ತಾ ಹಗರಣ ಮಾಡಿದ ತಪ್ಪಿಗೆ ಈಗ ಜೈಲಿನ ಕೋಣೆಯಲ್ಲಿ ಅಳುತ್ತಾ ಅನುಭವಿಸುವಂತಾಗಿದೆ.
ಗಳಗಳನೇ ಅತ್ತ ಬಾಡಿಗಾರ್ಡ್ ಕನಿಮೋಳಿ ಅವರನ್ನು ಬಂಧಿಸಿ ಪಟಿಯಾಲಾ ಹೌಸ್ನಿಂದ ತಿಹಾರ್ ಜೈಲಿನ ಲಾಕಪ್ಗೆ ಕರೆದೊಯ್ಯುವಾಗ ಆಕೆಯ ಅಂಗರಕ್ಷಕನೊಬ್ಬ ದುಃಖವನ್ನು ತಡೆಯಲಾರದೇ ಗಳಗಳನೇ ಅತ್ತ.
ಪತಿಯನ್ನು ಬಿಗಿಪ್ಪಿ ಕಣ್ಣೀರಿಟ್ಟ ಕನಿಮೋಳಿ ತಮ್ಮ ಬಂಧನದ ಆದೇಶ ಹೊರ ಬೀಳುತ್ತಿದ್ದಂತೆ ದಿಗ್ಭ್ರಾಂತರಾದ ಕನ್ನಿಮೋಳಿ ಉದ್ವೇಗವನ್ನು ಹಿಡಿದಿಡಲಾರದೇ ತಮ್ಮ ಪತಿ ಅರವಿಂದನ್ ಅವರನ್ನು ಬಿಗಿದಪ್ಪಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಡಿಎಂಕೆ ಸಂಸದಿಯ ಸಮಿತಿ ಮುಖ್ಯಸ್ಥ ಟಿ.ಆರ್. ಬಾಲು ಹಾಗೂ ಕುಟುಂಬದ ಇತರೆ ಸದಸ್ಯರೂ ಈ ಸಂದರ್ಭದಲ್ಲಿ ಹಾಜರಿದ್ದರು.