ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೋಧ್ರೋತ್ತರ ಹಿಂಸೆಯ ಫೈಲುಗಳ ನಾಶ: ಕಾಂಗ್ರೆಸ್ ಪ್ರಹಾರ
(Narendra Modi | Gujarat govt | Godhra riots | Manish Tewari)
ಗೋಧ್ರೋತ್ತರ ಹಿಂಸೆಯ ಫೈಲುಗಳ ನಾಶ: ಕಾಂಗ್ರೆಸ್ ಪ್ರಹಾರ
ನವದೆಹಲಿ, ಗುರುವಾರ, 30 ಜೂನ್ 2011( 19:59 IST )
2002ರಲ್ಲಿ ನಡೆದ ಗೋಧ್ರೋತ್ತರ ಹಿಂಸಾಚಾರದ ಸಂದರ್ಭದಲ್ಲಿ ರಾಜ್ಯ ಗುಪ್ತಚರ ಸಂಸ್ಥೆ ನೀಡಿದ್ದ ವರದಿಯನ್ನು ಗುಜರಾತ್ ಸರಕಾರವು ನಾಶಪಡಿಸಿರುವುದು "ಕ್ರಿಮಿನಲ್ ಒಳಸಂಚು" ಎಂದು ಹಿಂಸಾಚಾರದಲ್ಲಿ ತೊಂದರೆಗೊಳಗಾದವರ ಪರ ವಕೀಲರು ಮತ್ತು ಕಾಂಗ್ರೆಸ್ ಮುಖಂಡರು ಆಪಾದಿಸಿದ್ದಾರೆ.
ಹಿಂಸಾಚಾರದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಅವರ ಸಂಪುಟದ ಸಹೋದ್ಯೋಗಿಗಳು ಶಾಮೀಲಾಗಿರುವ ಸತ್ಯವನ್ನು ಮುಚ್ಚಿಡಲು ಪ್ರಯತ್ನ ನಡೆದಿದೆ ಎಂದು ಆಪಾದಿಸಿರುವ ಅವರು, ಬಿಜೆಪಿ ಸರಕಾರದ ಈ ಕ್ರಮದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
'ಇದು ಸತ್ಯ ಹೊರಬಾರದಂತೆ ಮಾಡುವ ಯಾವುದೇ ಕ್ರಿಮಿನಲ್ ಸಂಚಿಗಿಂತ ಭಿನ್ನವಾಗೇನಿಲ್ಲ. ರಾಜ್ಯ ಸರಕಾರವು ಇಡೀ ಪ್ರಕರಣವನ್ನೇ ಮುಚ್ಚಿಹಾಕಲು ಯತ್ನಿಸುತ್ತಿದೆ' ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ತಿಳಿಸಿದ್ದಾರೆ.
ದೇಶದ ಪರಮೋಚ್ಚ ನ್ಯಾಯಾಲಯದಿಂದ ತನಿಖೆಯಾಗುತ್ತಿರುವ ಮತ್ತು ಸಂಶಯದ ಬೆಟ್ಟು ನೇರವಾಗಿ ಮುಖ್ಯಮಂತ್ರಿ ಮೋದಿಯತ್ತಲೇ ತೋರಿಸುತ್ತಿರುವ "ನರಮೇಧ ಮತ್ತು ಹತ್ಯಾಕಾಂಡ"ಕ್ಕೆ ಸಂಬಂಧಿಸಿದ ದಾಖಲೆಗಳು ಈ ರೀತಿ ನಾಶವಾಗಿರುವುದು "ಸಂಪೂರ್ಣ ಹಾಸ್ಯಾಸ್ಪದ" ಎಂದು ತಿವಾರಿ ಬಣ್ಣಿಸಿದರು.
ತನಿಖೆ ನಡೆಯುತ್ತಿರುವ ಹಂತದಲ್ಲಿ, "ಹತ್ಯಾಕಾಂಡದಲ್ಲಿ ಸರಕಾರದ ಪಾತ್ರವಿದೆ" ಎಂಬುದರ ಮೇಲೆ ಬೆಳಕು ಚೆಲ್ಲಬಹುದಾಗಿದ್ದ ದಾಖಲೆಗಳ ಕಣ್ಮರೆ ಅಥವಾ ನಾಶವಾಗಿರುವುದು, ರಾಜ್ಯ ಸರಕಾರವು ತನ್ನ ಪಾತ್ರ ಮುಚ್ಚಿ ಹಾಕುವಲ್ಲಿ ಪ್ರಯತ್ನ ಮಾಡುತ್ತಿದೆ ಎಂಬುದರ ಮೇಲೆ ಸ್ಪಷ್ಟವಾಗಿ ಬೆಳಕು ಚೆಲ್ಲುತ್ತಿದೆ ಎಂದು ಅವರು ಹೇಳಿದರು.