ಆರ್ಎಸ್ಎಸ್ ಸಂಘಟನೆ ದೇಶದಲ್ಲಿ ಬಾಂಬ್ ಫ್ಯಾಕ್ಟರಿಗಳನ್ನು ತಯಾರಿಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿಕೆಗೆ ಉತ್ತರಿಸಿದ ಕಾಂಗ್ರೆಸ್, ತನಿಖೆ ನಡೆಯುತ್ತಿರುವಾಗ ಅನಗತ್ಯ ಹೇಳಿಕೆಗಳು ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ತಳ್ಳಿಹಾಕಿದೆ.
ಆರ್ಎಸ್ಎಸ್ ವಿರುದ್ಧ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ಸಮರ್ಥಿಸುತ್ತದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ, ನೀವು ದಿಗ್ವಿಜಯ್ ಸಿಂಗ್ ಅವರಿಗೆ ಪ್ರಶ್ನಿಸಿದಲ್ಲಿ ಉತ್ತಮವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಸಿಂಗ್ ಎನ್ಐಎ ಅಥವಾ ಸಿಬಿಐ ಮುಖ್ಯಸ್ಥರಲ್ಲ. ಯಾವುದಾದರೂ ಮೂಲಗಳಿಂದ ಇಂತಹ ಮಾಹಿತಿ ಬಂದಿದೆಯೇ? ಭದ್ರತಾ ಸಂಸ್ಥೆಗಳಿಗೆ ಸಂಬಂಧಿಸಿರುವ ವಿಷಯಗಳನ್ನು, ತಮ್ಮ ಅನಿಸಿಕೆಗಳಂತೆ ಹೇಳಿಕೆ ನೀಡುವುದು ಅವರಿಗೆ ಸೂಕ್ತವಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ದೇಶದ ತನಿಖಾ ಸಂಸ್ಥೆಗಳಿಗೆ ಮಾತ್ರ ಮಾಹಿತಿಯಿರುವ ಸಂಗತಿಗಳು, ದಿಗ್ವಿಜಯ್ ಸಿಂಗ್ ಅವರಿಗೆ ತಿಳಿದಿದ್ದಾದರೂ ಹೇಗೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು. ಇಂತಹ ಪ್ರಶ್ನೆಗಳನ್ನು ಅವರಿಗೆ ಕೇಳಿದಲ್ಲಿ ಸೂಕ್ತ ಎಂದು ಜಾರಿಕೊಂಡರು.
ಕಳೆದ ಶನಿವಾರದಂದು ಎಐಸಿಸಿ ಪ್ರದಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಮುಂಬೈ ಸರಣಿ ಸ್ಫೋಟದಲ್ಲಿ ಆರ್ಎಸ್ಎಸ್ ಸಂಘಟನೆಯ ಪಾತ್ರವನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ ಎಂದು ನೀಡಿದ ಹೇಳಿಕೆ ಕೋಲಾಹಲ ಸೃಷ್ಟಿಸಿತ್ತು.
ಆರ್ಎಸ್ಎಸ್ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ್ದ ಸಿಂಗ್, ಸಂಘಟನೆ ಬಾಂಬ್ ಫ್ಯಾಕ್ಟರಿಗಳನ್ನು ತಯಾರಿಸುತ್ತಿದೆ. ಆರ್ಎಸ್ಎಸ್ ಭಯೋತ್ಪಾದನೆ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಾಧಾರಗಳು ಬೇಕಿದ್ದಲ್ಲಿ ನನ್ನ ಹತ್ತಿರ ಲಭ್ಯವಿವೆ ಎಂದು ಹೇಳಿಕೆ ನೀಡಿ, ಭಾರಿ ಟೀಕೆಗೆ ಒಳಗಾಗಿದ್ದರು.
ದಿಗ್ವಿಜಯ್ ಸಿಂಗ್ ಹೇಳಿಕೆಗಳ ಬಗ್ಗೆ, ಕಾಂಗ್ರೆಸ್ ಪಕ್ಷವಾಗಲಿ ಅಥವಾ ಕೇಂದ್ರ ಸರಕಾರವಾಗಲಿ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ, ಆರ್ಎಸ್ಎಸ್ ಕೂಡಾ ಗಂಭೀರವಾಗಿ ಪರಿಗಣಿಸುವುದಿಲ್ಲ. ಮಾಜಿ ಮುಖ್ಯಮಂತ್ರಿಗೆ ಇಂತಹ ಸ್ಥಿತಿ ಬರಬಾರದಿತ್ತು ಎಂದು ಆರ್ಎಸ್ಎಸ್ ಮುಖಂಡ ಮಾಧವ್ ಅವರು ವಿಷಾದಿಸಿದರು.