ಇಡೀ ದೇಶದಲ್ಲೇ ಕೋಲಾಹಲವೆಬ್ಬಿಸಿರುವ ಕೋಟ್ಯಂತರ ರೂಪಾಯಿ ಮೊತ್ತದ 2ಜಿ ಸ್ಪೆಕ್ಟ್ರಂ ಹಂಚಿಕೆಯಲ್ಲಿ ನಾನೇನೂ ತಪ್ಪು ಮಾಡಿಲ್ಲ, ಇದಕ್ಕೆಲ್ಲ ಹಿಂದೆ ಆಡಳಿತ ನಡೆಸಿದ್ದ ಎನ್ಡಿಎ ಸರಕಾರದ ನೀತಿಯೇ ಕಾರಣ ಎಂದು ಹೇಳುವ ಮೂಲಕ ಬಂಧಿತರಾಗಿ ತಿಹಾರ್ ಜೈಲಿನಲ್ಲಿರುವ ದೂರಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ ಎನ್ಡಿಎ ಮೇಲೆ ಗೂಬೆ ಕೂರಿಸಿದ್ದಾರೆ.
ಸ್ಪೆಕ್ಟ್ರಂ ಹರಾಜು ಮಾಡದಿರುವ ನಿರ್ಧಾರವನ್ನು ಹಿಂದೆ ಅಧಿಕಾರದಲ್ಲಿದ್ದ ಎನ್ಡಿಎ ಸರಕಾರ ರೂಪಿಸಿದ್ದ ನಿಯಮದ ಅನುಸಾರವೇ ಕೈಗೊಂಡಿದ್ದೇನೆ ಎಂದು ಹೇಳಿದ ರಾಜಾ, ಈ ನೀತಿಯನ್ನು ನಾನು ಪಾಲಿಸಿದ್ದೇ ತಪ್ಪು ಎಂದಾದರೆ 1993ರ ಬಳಿಕ ಅಧಿಕಾರದಲ್ಲಿದ್ದ ಎಲ್ಲ ಟೆಲಿಕಾಂ ಸಚಿವರೂ ಸಹಾ ನನ್ನೊಂದಿಗೆ ಜೈಲಿನಲ್ಲಿರಬೇಕಾಗುತ್ತಿತ್ತು ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಓ.ಪಿ.ಸೈನಿ ಅವರೆದುರು ಹಾಜರಾದ ರಾಜಾ ತಿಳಿಸಿದರು.
ಪ್ರಕರಣದಲ್ಲಿ ಆರೋಪಿಗಳಾಗಿರುವ ಕೇಂದ್ರ ದೂರ ಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ ಹಾಗೂ ಇತರೆ 16 ಮಂದಿ ಹಾಗೂ ಮೂರು ದೂರಸಂಪರ್ಕ ಕಂಪನಿಗಳ ವಿರುದ್ಧ ನ್ಯಾಯಾಲಯದಲ್ಲಿ ಸಿಬಿಐಯ ವಾದ ಸರಣಿ ಮುಕ್ತಾಯವಾಗಿ, ಸೋಮವಾರ ರಾಜಾ ಅವರ ವಾದ ಸರಣಿ ಆರಂಭವಾಗಿದೆ.
ಎ. ರಾಜಾ ಹಾಗೂ ಇತರೆ 8 ಮಂದಿ ಮತ್ತು ಮೂರು ಖಾಸಗಿ ಟೆಲಿಕಾಂ ಕಂಪನಿಗಳಿಂದ ಸರಕಾರದ ಬೊಕ್ಕಸಕ್ಕೆ 30,984 ಕೋಟಿ ರೂ. ನಷ್ಟವಾಗಿದೆ ಎಂದು ಸಿಬಿಐ ಸಲ್ಲಿಸಿದ್ದ ಮೊದಲ ಆರೋಪ ಪಟ್ಟಿಯಲ್ಲಿ ಆಪಾದಿಸಲಾಗಿತ್ತು.
ಸಿಬಿಐನ ಪೂರಕ ಆರೋಪ ಪಟ್ಟಿಯಲ್ಲಿ ಡಿಎಂಕೆ ಸಂಸದೆ ಕನಿಮೊಳಿ ಹಾಗೂ ಕಲೈಞ್ಞರ್ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಶರದ್ ಕುಮಾರ್ ಅವರು ಸಹಾ ಒಳಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಆಪಾದಿಸಿದ್ದು, 214 ಕೋಟಿ ರೂ. ಟಿವಿ ವಾಹಿನಿಗೆ ಅಕ್ರಮವಾಗಿ ವರ್ಗಾವಣೆಯಾಗಿತ್ತು ಎಂದು ತಿಳಿಸಿತ್ತು.
ಪೂರಕ ಆರೋಪ ಪಟ್ಟಿಯಲ್ಲಿ ಸಿನೆಯುಗ್ ಫಿಲ್ಮ್ಸ್ ಸಂಸ್ಥಾಪಕ ಕರೀಂ ಮೊರಾನಿ, ಆಸಿಫ್ ಬಲ್ವಾ ಹಾಗೂ ಕುಸೆಗಾನ್ ಫ್ರೂಟ್ಸ್ ಮತ್ತು ವೆಜಿಟೆಬಲ್ಸ್ ಲಿಮಿಟೆಡ್ನ ರಾಜೀವ್ ಅಗರ್ವಾಲ್ ಅವರ ಹೆಸರೂ ಇತ್ತು. ಆಪಾದಿತರೆಲ್ಲರೂ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ತಮ್ಮ ವಾದವನ್ನು ಪೂರ್ಣಗೊಳಿಸುವ ಹಂತದಲ್ಲಿ ವಿಶೇಷ ಸರಕಾರಿ ಅಭಿಯೋಜಕ ಯು.ಯು.ಲಲಿತ್ ಅವರು, ಭಾರತೀಯ ಕಂದಾಯ ಸೇವಾ ಅಧಿಕಾರಿ ಮಂಜು ಮಾಧವನ್ ಅಥವಾ ಪ್ರಧಾನಮಂತ್ರಿಯ ಪತ್ರವನ್ನು ಪರಿಗಣಿಸಿದ್ದೇ ಆದರೆ, ಪರವಾನಗಿ ಶುಲ್ಕದ ಪರಿಷ್ಕರಣೆಯಿಂದಾಗಿ ದೇಶದ ಬೊಕ್ಕಸಕ್ಕೆ 30 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಿದ್ದರು.