ನಿರೀಕ್ಷಿತವಾಗಿಯೇ ಸರಕಾರದ ಲೋಕಪಾಲ ಮಸೂದೆ ಸಿದ್ಧವಾಗಿದೆ. ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿ ಯಾವುದಕ್ಕೆ ಪಟ್ಟು ಹಿಡಿದಿತ್ತೋ, ಅವುಗಳಿಗೆ ಮಣೆ ಹಾಕದೆ, ಪ್ರಧಾನ ಮಂತ್ರಿ ಮತ್ತು ನ್ಯಾಯಾಂಗ ಅಧಿಕಾರಿಗಳನ್ನು ಲೋಕಪಾಲ ವ್ಯಾಪ್ತಿಯಿಂದ ಹೊರಗಿಡುವ ಲೋಕಪಾಲ ಮಸೂದೆಗೆ ಕೇಂದ್ರ ಸಂಪುಟವು ಗುರುವಾರ ಅನುಮೋದನೆ ನೀಡಿದ್ದು, ಅದನ್ನು ಆಗಸ್ಟ್ 1ರಂದು ಸಂಸತ್ತಿನ ಮುಂದೆ ಮಂಡಿಸಲಾಗುತ್ತದೆ.
ಮಾಹಿತಿ ಸಚಿವೆ ಅಂಬಿಕಾ ಸೋನಿ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದು, ಈ ಕರಡು ಮಸೂದೆಯ ಪ್ರಕಾರ, ಲೋಕಪಾಲ ಸಂಸ್ಥೆಗೆ ಅಧ್ಯಕ್ಷರ ಸಹಿತ ಒಂಬತ್ತು ಸದಸ್ಯರಿರುತ್ತಾರೆ. ಅದರಲ್ಲಿ ನಾಲ್ವರು ನ್ಯಾಯಾಂಗಕ್ಕೆ ಸಂಬಂಧಿಸಿರುವವರು. ಹಾಲಿ ಅಥವಾ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಅಧ್ಯಕ್ಷರಾಗಿರುತ್ತಾರೆ. ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಈ ಕರಡು ಮಸೂದೆಗೆ ಸಂಪುಟವು ಅಂಗೀಕಾರ ನೀಡಿದೆ ಎಂದರು.
ಈ ಬಗ್ಗೆ ಈಗಾಗಲೇ ನಾಗರಿಕ ಸಮಿತಿಯಿಂದ ವಿರೋಧ ವ್ಯಕ್ತವಾಗಿದೆ. ಪ್ರಸ್ತುತ ವರದಿಯು ದುರ್ಬಲವಾಗಿದ್ದು, ಜನಸಾಮಾನ್ಯರ ಪರವಾಗಿಲ್ಲ ಎಂದು ನಾಗರಿಕ ಸಮಿತಿ ಸದಸ್ಯೆ ಕಿರಣ್ ಬೇಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರಕಾರದ ಪರ ಸಮಿತಿಯ ಲೋಕಪಾಲ ಮಸೂದೆಯಿಂದ ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ. ಆದ್ದರಿಂದ, ನಾಗರಿಕ ಸಮಿತಿ ರಚಿಸಿದ ಲೋಕಪಾಲ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಹಿರಿಯ ಗಾಂಧಿವಾದಿ ಸಮಾಜಸೇವಕ ಅಣ್ಣಾ ಹಜಾರೆ ಬಯಸಿದ್ದರು.
ಒಂದು ವೇಳೆ ಲೋಕಸಭೆಯಲ್ಲಿ ಶಕ್ತಿಯುತ ಲೋಕಪಾಲ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ, ದೇಶದ ಇತಿಹಾಸವನ್ನು ಬದಲಿಸುವಂತಹ ಸುವರ್ಣಾವಕಾಶ ಸರಕಾರಕ್ಕೆ ದೊರೆತಿತ್ತು ಎಂದು ಹಜಾರೆ ನಿರಾಸೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಂಡಿಸುತ್ತಿರುವ ಲೋಕಪಾಲ ಮಸೂದೆ, ಜನಸಾಮಾನ್ಯರ ನಿರೀಕ್ಷೆಗೆ ಹತ್ತಿರವಾಗಿಲ್ಲ. ಸರಕಾರದ ಲೋಕಪಾಲ ಮಸೂದೆ ' ತೀರಾ ದುರ್ಬಲ' ಮತ್ತು ನಿಷ್ಪ್ರಯೋಜಕವಾಗಿದೆ ಹಾಗೂ ಕಡಿಮೆ ನ್ಯಾಯಾಂಗ ವ್ಯಾಪ್ತಿಯನ್ನು ಹೊಂದಿದೆ ಎಂದು ಟೀಕಿಸಿದ್ದಾರೆ.
ನಾಗರಿಕ ಸಮಿತಿಯ ಮತ್ತೊಬ್ಬ ಸಮಿತಿ ಸದಸ್ಯ ಅರವಿಂದ್ ಕೇಜ್ರಿವಾಲ್ ಮಾತನಾಡಿ, ಪ್ರಸ್ತುತ ಸರಕಾರ ಮಂಡಿಸುತ್ತಿರುವ ಲೋಕಪಾಲ್ ಮಸೂದೆ ಜನಸಾಮಾನ್ಯರ ಪರವಾಗಿಲ್ಲ. ಇಂತಹ ಮಸೂದೆಯಿಂದ ಭ್ರಷ್ಟಾಚಾರ ನಿಗ್ರಹ ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.