ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಧಿವೇಶನ: ಬಿಜೆಪಿ ವರಿಷ್ಠರ ಭೇಟಿಗೆ ಮುಂದಾದ ಪ್ರಣಬ್ (Sushma Swaraj | Pranab Mukherjee | Monsoon Session | L K Advani)
ಅಧಿವೇಶನ: ಬಿಜೆಪಿ ವರಿಷ್ಠರ ಭೇಟಿಗೆ ಮುಂದಾದ ಪ್ರಣಬ್
ನವದೆಹಲಿ, ಭಾನುವಾರ, 31 ಜುಲೈ 2011( 10:20 IST )
ಸೋಮವಾರದಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನ ಕೋಲಾಹಲ ಸೃಷ್ಟಿಸುವ ನಿರೀಕ್ಷೆಗಳಿವೆ. ಲೋಕಸಭಾ ನಾಯಕ ಪ್ರಣಬ್ ಮುಖರ್ಜಿ, ರವಿವಾರದಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿಯವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆಯ ಸಭಾಪತಿ ಮೀರಾ ಕುಮಾರ್, ಕೂಡಾ ಮುಂಗಾರು ಅಧಿವೇಶನ ಪೂರ್ವ ಸಭೆಯನ್ನು ರವಿವಾರದಂದು ಕರೆದಿದ್ದಾರೆ ಎನ್ನಲಾಗಿದೆ.
ಲೋಕಾಯುಕ್ತ ವರದಿಯಲ್ಲಿ ನೇರ ಆರೋಪಿಯಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಇವರ ರಾಜೀನಾಮೆ ಪಡೆದು ನೈತಿಕ ಸ್ಥೈರ್ಯ ಹೆಚ್ಚಿಸಿಕೊಂಡಿರುವ ಲೋಕಸಭೆಯ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ, 2ಜಿ ಹಾಗೂ ಇತರ ಭ್ರಷ್ಟಾಚಾರ ಹಗರಣಗಳ ಬಗ್ಗೆ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಿದ್ಧತೆ ನಡೆಸಿದೆ
ದರ ಏರಿಕೆ, ಇಂಡೋ-ಪಾಕ್ ಮಾತುಕತೆ ವೈಫಲ್ಯತೆ ಹಾಗೂ ಇತ್ತೀಚೆಗೆ ಮುಂಬೈಯಲ್ಲಿ ನಡೆದ ಸ್ಫೋಟಗಳ ಬಗ್ಗೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ತಂತ್ರಗಳನ್ನು ರೂಪಿಸಿದೆ ಎನ್ನಲಾಗಿದೆ.
ವಿರೋಧ ಪಕ್ಷಗಳು ಸರಕಾರಕ್ಕೆ ಸಹಕಾರ ನೀಡುವ ಬಗ್ಗೆ ಖಚಿತಪಡಿಸಿಕೊಳ್ಳಲು ರವಿವಾರದಂದು ಸಭೆಯನ್ನು ಕರೆಯಲಾಗಿದೆ. ಕೇಂದ್ರ ಸರಕಾರ ವಿವಾದಾತ್ಮಕ ಕೋಮು ಹಿಂಸಾಚಾರ ತಡೆ ಮಸೂದೆಯನ್ನು ಮಂಡಿಸಲು ನಿರ್ಧರಿಸಿದೆ. ಆದರೆ, ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಭೂ ಸ್ವಾಧೀನ ಮಸೂದೆ ಹಾಗೂ ಲೋಕಪಾಲ ಮಸೂದೆ ವಿವಾದಗಳು ಕೂಡಾ ವಿಪಕ್ಷಗಳ ಬತ್ತಳಿಕೆಯಲ್ಲಿದ್ದು, ಸರಕಾರದ ವಿರುದ್ಧ ಮುಂಗಾರು ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಸುವ ಸಾಧ್ಯತೆಗಳಿವೆ.
ಸಂಸತ್ತನ್ನು ಬಹಿಷ್ಕರಿಸಲು ಬಿಜೆಪಿ ನಿರ್ಧರಿಸಿಲ್ಲ. ಆದರೆ, ಲೋಕಸಭಾ ಮತ್ತು ರಾಜ್ಯಸಭೆಗಳಲ್ಲಿ ಸರಕಾರದ ವೈಫಲ್ಯಗಳ ವಿರುದ್ಧ ದಾಳಿಗೆ ಸಜ್ಜಾಗಿದ್ದೇವೆ ಎಂದು ಪಕ್ಷದ ಹಿರಿಯ ನಾಗರಿಕರು ತಿಳಿಸಿದ್ದಾರೆ.