ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಮ್ಮ ಜೈಲಿನಲ್ಲಿದ್ದವರನ್ನು ಪಾಕ್ ಬಿಡುಗಡೆ ಮಾಡಬೇಕಂತೆ! (S M Krishna | Prime Minister | Manmohan Singh | Faux pas | Dr. Chisti)
ನಮ್ಮ ಜೈಲಿನಲ್ಲಿದ್ದವರನ್ನು ಪಾಕ್ ಬಿಡುಗಡೆ ಮಾಡಬೇಕಂತೆ!
ನವದೆಹಲಿ, ಶುಕ್ರವಾರ, 12 ಆಗಸ್ಟ್ 2011( 09:03 IST )
ಸಂಸತ್ತಿನಲ್ಲಿ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಅಜ್ಮೀರ್ ಜೈಲಿನಲ್ಲಿರುವ ಪಾಕಿಸ್ತಾನದ ವೈದ್ಯರ ವಿಷಯದ ಬಗ್ಗೆ ಪ್ರಶ್ನೆಯನ್ನು ಅಸ್ಪಷ್ಟವಾಗಿ ಅರ್ಥಮಾಡಿಕೊಂಡ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಪಾಕಿಸ್ತಾನ ಸರಕಾರ ಮಾನವೀಯತೆಯ ಆಧಾರದ ಮೇಲೆ ಬಿಡುಗಡೆ ಮಾಡಬೇಕು ಎನ್ನುವ ವಿಚಿತ್ರ ಹೇಳಿಕೆ ನೀಡಿದಾಗ ನಗಬೇಕೋ ಅಳಬೇಕೋ ಎನ್ನುವುದು ಸಂಸತ್ತಿನ ಸದಸ್ಯರಿಗೆ ತಿಳಿಯದಾಯಿತು.
ನಂತರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಪ್ರಧಾನಿ ಮನಮೋಹನ್ ಸಿಂಗ್ ಮಧ್ಯಪ್ರವೇಶಿಸಿ ವಿಷಯವನ್ನು ಸ್ಪಷ್ಟಪಡಿಸಬೇಕಾದ ಅನಿವಾರ್ಯತೆ ಎದುರಾಯಿತು.
1992ರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ತಾಯಿಯನ್ನು ನೋಡಲು ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿದ್ದ ವೈರೋಲಾಜಿಸ್ಟ್ ವೈದ್ಯ ಮೊಹಮ್ಮದ್ ಖಲೀಲ್ ಚಿಸ್ಟಿ, ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಚಿಸ್ಟಿ ಬಿಡುಗಡೆಗೆ ಸರಕಾರ ಯಾವ ಕ್ರಮ ಕೈಗೊಂಡಿದೆ ಎಂದು ಜೆಡಿ(ಯು) ಸದಸ್ಯ ಶಿವಾನಂದ್ ತಿವಾರಿ ಪ್ರಶ್ನೋತ್ತರ ವೇಳೆಯಲ್ಲಿ ಪ್ರಸ್ತಾಪಿಸಿದ್ದರು.
ತಿವಾರಿಯವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ, ನಿರ್ದಿಷ್ಟ ವ್ಯಕ್ತಿಯನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದ್ದು ಮಾನವೀಯತೆಯ ಆಧಾರದ ಮೇಲೆ ಪರಿಗಣಿಸಿ ಸರಕಾರ ಅವರನ್ನು ಬಿಡುಗಡೆ ಮಾಡಬೇಕು. ವ್ಹೀಲ್ ಚೇರ್ನಲ್ಲಿ ಸಾಗುವ 80 ವರ್ಷ ವಯಸ್ಸಿನ ವ್ಯಕ್ತಿಯಾದ ಚಿಸ್ಟಿಯ ಬಗ್ಗೆ ಪಾಕ್ ಸರಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುವ ವಿಶ್ವಾಸವಿದೆ ಎಂದಾಗ, ಪ್ರತಿಯೊಬ್ಬ ಸದಸ್ಯರು ನಗೆಗಡಲಲ್ಲಿ ತೇಲುವ ಸ್ಥಿತಿ ಎದುರಾಯಿತು.
ವಿದೇಶಾಂಗ ಸಚಿವ ಕೃಷ್ಣ ಅವರ ಹೇಳಿಕೆಯಿಂದ ಅಚ್ಚರಿಗೊಂಡ ವಿಪಕ್ಷ ಸದಸ್ಯರು ಯಾವ ಕೈದಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕೇಳಿದರು. ಸಿಪಿಐ(ಎಂ) ಬೃಂದಾ ಕಾರಟ್ ಮಾತನಾಡಿ, ಸಚಿವರು ಪ್ರಶ್ನೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದಾಗ ವಿರೋಧಪಕ್ಷಗಳ ಸದಸ್ಯರು ಮೇಜು ಕುಟ್ಟಿ ಗದ್ದಲವೆಬ್ಬಿಸಿದರು.
ಪ್ರಧಾನಿ ಮನಮೋಹನ್ ಸಿಂಗ್ ಮಧ್ಯಪ್ರವೇಶಿಸಿ, ಡಾ.ಚಿಸ್ಟಿ ರಾಜಸ್ಥಾನದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಚಿಸ್ಟಿಯವರನ್ನು ಬಿಡುಗಡೆ ಮಾಡುವಂತೆ ತಮ್ಮ ಬಳಿ ಕೋರಿದಾಗ ರಾಜಸ್ಥಾನ ಸರಕಾರದೊಂದಿಗೆ ನಿರಂತರ ಸಂಪರ್ಕದಲ್ಲಿರುವ ಗೃಹ ಸಚಿವಾಲಯವನ್ನು ಸಂಪರ್ಕಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.