ಹಿರಿಯ ಗಾಂಧಿವಾದಿ, ಸಮಾಜ ಸುಧಾರಕ ಅಣ್ಣಾ ಹಜಾರೆ 15 ದಿನಗಳವರೆಗೆ ಮಾತ್ರ ಆಮರಣ ನಿರಶನ ಮಾಡುವ ಪೊಲೀಸರ ಷರತ್ತುಗಳಿಗೆ ಒಪ್ಪಿಕೊಂಡಿದ್ದರೂ ರಾಮಲೀಲಾ ಮೈದಾನ ನಿರಶನಕ್ಕಾಗಿ ಸಿದ್ಧಗೊಳ್ಳುವವರೆಗೆ ತಿಹಾರ್ ಜೈಲಿನಲ್ಲಿರಲಿದ್ದಾರೆ ಎಂದು ಅಣ್ಣಾ ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಮಲೀಲಾ ಮೈದಾನ ಕೆಟ್ಟ ಸ್ಥಿತಿಯಲ್ಲಿರುವುದರಿಂದ, ದೆಹಲಿ ಸರಕಾರದ ಲೋಕೋಪಯೋಗಿ ಇಲಾಖೆ ನಿರಶನಕ್ಕಾಗಿ ಮೈದಾನವನ್ನು ಸುಸ್ಥಿತಿಗೆ ತರುವ ಕಾರ್ಯ ಆರಂಭಿಸಿದೆ ಎಂದು ತಿಳಿಸಿದ್ದಾರೆ.
ರಾಮಲೀಲಾ ಮೈದಾನ ಸಂಪೂರ್ಣವಾಗಿ ಸಿದ್ಧಗೊಂಡ ನಂತರ ಅಣ್ಣಾ ಹಜಾರೆ ತಿಹಾರ್ ಜೈಲಿನಿಂದ ನೇರವಾಗಿ ಅಲ್ಲಿಗೆ ತೆರಳಲಿದ್ದಾರೆ. ಮತ್ತೆ ಬೇರೆ ಕಡೆ ತೆರಳುತ್ತಿಲ್ಲ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.
ಅಣ್ಣಾ ಹಜಾರೆ, ಇಂದು ಮಧ್ಯಾಹ್ನ 3 ಗಂಟೆಗೆ ರಾಮಲೀಲಾ ಮೈದಾನಕ್ಕೆ ತೆರಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.