ಜನ ಲೋಕಪಾಲ ವಿಧೇಯಕ ಜಾರಿ ಆಗ್ರಹಿಸಿ ಗಾಂಧಿವಾದಿ ಅಣ್ಣಾ ಹಜಾರೆ ನಡೆಸಿಕೊಂಡು ಬರುತ್ತಿರುವ ಉಪವಾಸ ಸತ್ಯಾಗ್ರಹ ಆರನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟಾದರೂ ಯಾವುದೇ ಮಾತುಕತೆಗೆ ಮುಂದಾಗದ ಕೇಂದ್ರ ಸರಕಾರವು ಕಿವುಡನಂತೆ ವರ್ತಿಸುತ್ತಿದೆ ಎಂದು ಅಣ್ಣಾ ಆಪ್ತರಾದ ಕಿರಣ್ ಬೇಡಿ ಆಪಾದಿಸಿದ್ದಾರೆ.
73 ಹರೆಯದ ಗಾಂಧಿವಾದಿ ಅಣ್ಣಾ ಹಜಾರೆ ಆರೋಗ್ಯದ ಬಗ್ಗೆ ಕೇಂದ್ರ ಸರಕಾರ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ಕಳೆದ ಆರು ದಿನದಿಂದ ಅಣ್ಣಾ ಆಹಾರ ಸೇವಿಸಿಲ್ಲ. ಆದರೆ ಅವರ ಆರೋಗ್ಯದ ಬಗ್ಗೆ ಯಾರು ಕೂಡಾ ಕಾಳಜಿ ವಹಿಸುತ್ತಿಲ್ಲ ಎಂದವರು ಕಿಡಿ ಕಾರಿದರು.
ಮಾತು ಮುಂದುವರಿಸಿದ ಕಿರಣ್ ಬೇಡಿ, ಅಣ್ಣಾ ಮುಂದಿಟ್ಟಿರುವ ಗಡುವಿನೊಳಗೆ ಜನ ಲೋಕಪಾಲ ಮಸೂದೆ ಜಾರಿ ಮಾಡಲು ಸರಕಾರ ಹಾಗೂ ಸಂಸದರು ಮುಂದಾಗಬೇಕು ಎಂದು ಆಗ್ರಹಿಸಿದರು.
ಶುಕ್ರವಾರ ಸರಕಾರಕ್ಕೆ ಗಡುವು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಆಗಸ್ಟ್ 31ರೊಳಗೆ ಜನ ಲೋಕಪಾಲ ಮಸೂದೆಗೆ ಅನುಮೋದನೆ ಸಿಗದಿದ್ದಲ್ಲಿ ಆಮರಣಾಂತ ನಿರಶನ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಆನಂತರ ಮಾತನಾಡಿದ್ದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ನಾಗರಿಕ ಸಮಿತಿ ಜತೆ ಮಾತುಕತೆಗೆ ಸಿದ್ಧ ಎಂದಿದ್ದರು. ಆದರೆ ಈ ಪ್ರಕ್ರಿಯೆಗೆ ಹೆಚ್ಚಿನ ಕಾಲವಕಾಶ ಕೋರಿದ್ದರು. ಇದಕ್ಕೆ ಉತ್ತರಿಸಿದ ಅರವಿಂದ್ ಕ್ರೇಜಿವಾಲ್, ಸರಕಾರ ಮಾತುಕತೆಗೆ ಸಿದ್ಧವಿದೆ ಎಂದು ಹೇಳುತ್ತಿದೆ. ಆದರೆ ಇದುವರೆಗೆ ಆಹ್ವಾನ ನೀಡಿಲ್ಲ. ಮಾತುಕತೆ ಎಲ್ಲಿ, ಯಾರ ಜತೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಕಿಡಿ ಕಾರಿದರು.