ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ವಿರುದ್ಧ ತಾವು ನೀಡಿದ ಹೇಳಿಕೆಗೆ ವಿಷಾದ ವ್ಯಕ್ತಪಡಿಸುವುದಾಗಿ ಕಾಂಗ್ರೆಸ್ ಪಕ್ಷದ ವಕ್ತಾರ ಮನೀಷ್ ತಿವಾರಿ ಹೇಳಿದ್ದಾರೆ
ಇತ್ತೀಚೆಗೆ ನಾನು ನೀಡಿದ ಹೇಳಿಕೆಗಳಿಂದ ಅಣ್ಣಾ ಹಜಾರೆಯವರಿಗೆ ನೋವಾಗಿದೆ. ಅದಕ್ಕಾಗಿ ವಿಷಾದಿಸುತ್ತೇನೆ. ನಿರಶನ ಅಂತ್ಯಗೊಳಿಸುಂತೆ ದೇಶದ ನಾಗರಿಕನಾಗಿ ಮನವಿ ಮಾಡುತ್ತೇನೆ ಎಂದು ತಿವಾರಿ ತಿಳಿಸಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ ಕೆಲವು ಬಾರಿ ಅವಸರದಲ್ಲಿ ನೀಡಿದ ಹೇಳಿಕೆಗಳು, ಇತರರಿಗೆ ನೋವು ತರುತ್ತವೆ. ಅಣ್ಣಾ ಆರೋಗ್ಯದ ಬಗ್ಗೆ ನಾನು ತುಂಬಾ ಕಳವಳಗೊಂಡಿದ್ದೇನೆ ಎಂದು ಅಣ್ಣಾ ಭ್ರಷ್ಟ ಎಂದು ಟೀಕಿಸಿದ್ದ ತಿವಾರಿ ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ಆಗಸ್ಟ್ 14 ರಂದು ನ್ಯಾಯಮೂರ್ತಿ ಪಿಬಿ ಸಾವಂತ್ ಆಯೋಗದ ವರದಿಯನ್ನು ಉಲ್ಲೇಖಿಸಿ, ಅಣ್ಣಾ ಹಜಾರೆ ಅಡಿಯಿಂದ ಮುಡಿವರೆಗೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದ್ದರು.
ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರ ಚಾರಿತ್ರ್ಯವಧೆ ಮಾಡಲು ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಗಾಂಧಿವಾದಿಗಳ ಭಾವನೆಗಳಿಗೆ ನೋವು ತಂದಿದ್ದಾರೆ ಎಂದು ತಿವಾರಿ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.
ನವದೆಹಲಿಯ ಸರಭಾ ನಗರದಲ್ಲಿರುವ ತಿವಾರ್ ನಿವಾಸಕ್ಕೆ ಆಗಮಿಸಿದ ಸಾವಿರಾರು ಅಣ್ಣಾ ಹಜಾರೆ ಬೆಂಬಲಿಗರು ಹೂಗಳನ್ನು ನೀಡಿ ಗಾಂಧಿತತ್ವವನ್ನು ಮೆರೆದರು.