ಕಲ್ಕಿ ಭಗವಾನ್ ಫೋಟೋದಿಂದ ಜೇನು ತುಪ್ಪ ಒಸರುತ್ತಿದೆ ಎಂಬ ಸುದ್ದಿಯ ಬೆನ್ನಿಗೆ ಮತ್ತೊಂದು ಕೌತುಕ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತ್ರಿಯಂಬಕಪುರದಲ್ಲಿನ ದುರ್ಗಾದೇವಿ ವಿಗ್ರಹದಿಂದ ಕಣ್ಣೀರು ಸುರಿಯುತ್ತಿರುವುದನ್ನು ನೋಡಿದ ಗ್ರಾಮಸ್ಥರು ಭಾವ ಪರವಶರಾಗಿದ್ದಾರೆ.
ಇಲ್ಲಿ ಹಲವು ಶತಮಾನಗಳ ಹಳೆಯದಾದ ಶಿವಾಲಯವೊಂದರಲ್ಲಿನ ಪೌಳಿಯಲ್ಲಿರುವ ಸಪ್ತ ಮಾತೃಕೆಯರ ಗುಡಿಯಲ್ಲಿ ದುರ್ಗಾದೇವಿ (ಚಾಮುಂಡೇಶ್ವರಿ) ಮೂರ್ತಿಯಿದೆ. ಈ ವಿಗ್ರಹದಿಂದ ನಾಲ್ಕು ನಿಮಿಷಗಳ ಕಾಲ ಕಣ್ಣೀರು ಸುರಿದಿತ್ತು ಎಂದು ಭಕ್ತರು ವಿವರಿಸಿದ್ದಾರೆ.
ಪಾಳುಬಿದ್ದಿರುವ ಈ ದೇವಾಲಯದಲ್ಲಿ ದಿನ ನಿತ್ಯ ಪೂಜೆ-ಪುನಸ್ಕಾರಗಳು ನಡೆಯುತ್ತಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಯಾರಾದರೂ ಬಂದು ಪೂಜೆ ಮಾಡುತ್ತಿದ್ದರು. ಪುರಾತನ ದೇವಾಲಯವಾದ ಕಾರಣ ಬಹುತೇಕ ಶಿಥಿಲಗೊಂಡಿದ್ದು, ಮೂರ್ತಿಗಳು ಕೂಡ ಭಗ್ನಗೊಂಡಿವೆ. ಅಳಿದುಳಿದ ವಿಗ್ರಹಗಳನ್ನು ಕಳ್ಳಕಾಕರು ಎತ್ತೊಯ್ದಿದ್ದರು.
ಕಾರ್ತಿಕ ಮಾಸವಾದ ಕಾರಣ ಸೋಮವಾರ ವಿಶೇಷ ಪೂಜೆ ಮಾಡಬೇಕೆಂದು ದೇವಸ್ಥಾನವನ್ನು ಶುಚಿಗೊಳಿಸಲು ಗ್ರಾಮಸ್ಥರು ಮುಂದಾಗಿದ್ದರು.
ಈ ರೀತಿ ಇತರ ವಿಗ್ರಹಗಳಿಗೆ ಪೂಜೆ ಮಾಡಿದಂತೆ ಚಾಮುಂಡೇಶ್ವರಿ ವಿಗ್ರಹಕ್ಕೂ ಪೂಜೆ ಮಾಡಲು ಮುಂದಾದಾಗ ದೇವಿ ಕಣ್ಣು ತೆರೆದು ನೀರು ಸುರಿಸುತ್ತಿರುವುದನ್ನು ಅರ್ಚಕರು ಕಂಡು ಚಕಿತರಾಗಿದ್ದರು. ವಿಗ್ರಹದ ಬಲಗಣ್ಣಿಗಿಂತ ಎಡಗಣ್ಣು ಹೆಚ್ಚು ತೆರೆದಂತೆ ಕಂಡಿದ್ದು, ನೀರು ಬರುತ್ತಿದ್ದುದನ್ನು ಹಲವರು ಕಂಡಿದ್ದಾರೆ.
ಕೆಲವರು ಇದರ ಫೋಟೋ ಕೂಡ ತೆಗೆದಿದ್ದಾರೆ. ಅರ್ಚಕರು ಕಣ್ಣೀರನ್ನು ಒರೆಸಲು ಯತ್ನಿಸಿದಾಗಲೂ ನೀರು ಒತ್ತರಿಸಿ ಬರುತ್ತಿತ್ತು ಎಂದು ಹೇಳಲಾಗಿದೆ.
ಹಿಂದೆ ಈ ದೇವಿಗೆ ಊರಿನಲ್ಲಿ ಜಾತ್ರೆ ನಡೆಸಲಾಗುತ್ತಿತ್ತು. ಮತ್ತೆ ಜಾತ್ರೆ ಆರಂಭಿಸಬೇಕೆಂಬುದು ದೇವಿಯ ಬಯಕೆಯಾಗಿರಬಹುದು ಎಂದು ಗ್ರಾಮದ ಹಿರಿಯರು ಅಭಿಪ್ರಾಯಪಟ್ಟಿದ್ದಾರೆ.