ಪರ-ವಿರೋಧದ ನಡುವೆಯೇ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಗುರುವಾರ ಬೆಳಿಗ್ಗೆ ಅಧಿಕೃತವಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದು ಖಚಿತವಾಗಿದೆ.
ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ನಾಳೆ ಬೆಳಿಗ್ಗೆ 10ಗಂಟೆಗೆ ನಡೆಯಲಿರುವ ಸರಳ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಖಚಿತಪಡಿಸಿದ್ದಾರೆ.
ಯಡ್ಡಿ-ರೆಡ್ಡಿ ಗುಂಪಿನ ನಂತರ ಬಂಡಾಯದ ಬಾವುಟ ಹಾರಿಸಿದ್ದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೊನೆಗೂ ಮಂತ್ರಿಗಿರಿ ಧಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪಕ್ಷದಲ್ಲಿ ಸಾಕಷ್ಟು ಮಂದಿ ಹಿರಿಯರಿದ್ದರೂ ಕೂಡ ರೇಣುಕಾಚಾರ್ಯ ಅವರಿಗೆ ಸಚಿವಪಟ್ಟ ನೀಡುವುದಕ್ಕೆ ಬೆಂಗಳೂರು ನಗರದ ಸುಮಾರು 28ಕ್ಕೂ ಅಧಿಕ ಶಾಸಕರು ಮಂಗಳವಾರ ವಿರೋಧ ವ್ಯಕ್ತಪಡಿಸಿ ಸಹಿ ಸಂಗ್ರಹ ನಡೆಸಿದ್ದರು.
ಆರ್ಎಸ್ಎಸ್ ಕಚೇರಿಗೆ ರೇಣುಕಾಚಾರ್ಯ ಭೇಟಿ: ಸಚಿವಪಟ್ಟ ದೊರೆಯುತ್ತಿರುವುದಕ್ಕೆ ಪಕ್ಷದೊಳಗಿನ ಶಾಸಕರೇ ಅತೃಪ್ತಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ರೇಣುಕಾಚಾರ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ಆರ್ಎಸ್ಎಸ್ ಪಡಸಾಲೆ ಕೇಶವಕೃಪಾಕ್ಕೆ ಆಗಮಿಸಿ ಸುದೀರ್ಘ ಚರ್ಚೆ ನಡೆಸಿದರು.
ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದೊಳಗೆ ಯಾವುದೇ ಬಿಕ್ಕಟ್ಟಿಲ್ಲ, ಅಲ್ಲದೆ ನಾನು ಸಚಿವನಾಗಬಾರದೆಂದು ಯಾವ ಶಾಸಕರೂ ಸಹಿ ಸಂಗ್ರಹಿಸಿಲ್ಲ ಎಂದರು. ನಾಳೆ ಸಚಿವನಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ನೆಲೆಯಲ್ಲಿ ಹಿರಿಯರ ಆಶೀರ್ವಾದ ಪಡೆಯುವುದಕ್ಕಾಗಿ ಕೇಶವಕೃಪಾಕ್ಕೆ ಆಗಮಿಸಿರುವುದಾಗಿ ಹೇಳಿದರು.