ಚಿಕ್ಕಮಗಳೂರು, ಗುರುವಾರ, 24 ಡಿಸೆಂಬರ್ 2009( 15:47 IST )
NRB
'ಪಕ್ಷದಲ್ಲಿನ ದಿನನಿತ್ಯದ ವಿದ್ಯಾಮಾನಗಳಿಂದ ಬೇಸರಗೊಂಡಿದ್ದೇನೆ. ಭಿನ್ನಮತ ಪಕ್ಷದ ಆದರ್ಶ, ತತ್ವ-ಸಿದ್ದಾಂತಗಳಿಗೆ ಕಪ್ಪು ಚುಕ್ಕೆಯಾಗಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಖೇದ ವ್ಯಕ್ತಪಡಿಸಿದ್ದಾರೆ.
ಗುರುವಾರ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಪಕ್ಷದೊಳಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಇದು ನಿಜಕ್ಕೂ ಭಾರತೀಯ ಜನತಾ ಪಕ್ಷದ ಆದರ್ಶಗಳಿಗೆ ವಿರುದ್ಧವಾದದ್ದು. ಆ ನಿಟ್ಟಿನಲ್ಲಿ ವರಿಷ್ಠರೊಂದಿಗೆ ಚರ್ಚಿಸಿ ಭಿನ್ನಮತ ವಿದ್ಯಾಮಾನಗಳಿಗೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಸಚಿವರಾಗಿ ಆಯ್ಕೆಯಾಗಿರುವುದನ್ನು ಸಮರ್ಥಿಸಿಕೊಂಡ ಅವರು, ಈ ಹಿಂದೆ ನಡೆದ ಒಪ್ಪಂದದಂತೆ ರೇಣುಕಾಚಾರ್ಯ ಅವರಿಗೂ ಸಚಿವ ಸ್ಥಾನ ಕಲ್ಪಿಸಿಕೊಡಲು ನಿರ್ಧರಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಅವರು ಸಚಿವರಾಗಿದ್ದಾರೆ. ಇದರಲ್ಲಿ ಬೇರೇನೂ ಅಪಾರ್ಥ ಮಾಡಿಕೊಳ್ಳಬೇಕಾಗಿಲ್ಲ ಎಂದು ಸಮಜಾಯಿಷಿ ನೀಡಿದರು. ಅಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಜನವರಿ 10ರಿಂದ ಚಾಲನೆ ನೀಡಲಾಗುವುದು ಎಂದು ಸದಾನಂದ ಗೌಡರು ಹೇಳಿದರು.