ಬಿಬಿಎಂಪಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರಾತ್ರೋರಾತ್ರಿ ನಡೆದ ಬಹುಕೋಟಿ ರೂ.ಗಳ ಟೆಂಡರ್ ಹಗರಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇರ ಬೆಂಬಲವಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.
ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3,400ಕೋಟಿ ರೂ.ಗಳ ಪಾಲಿಕೆಯ ಟೆಂಡರ್ ಹಗರಣದಲ್ಲಿ ಮುಖ್ಯಮಂತ್ರಿಗಳು ಶಾಮೀಲಾಗಿದ್ದಾರೆ ಎಂದು ಆಪಾದಿಸಿದರು.
ಈ ಟೆಂಡರ್ ಪಕ್ರಿಯೆ ಅವರ ಸಂಪೂರ್ಣ ಸಮ್ಮತಿಯಿಂದಲೇ ನಡೆದಿದ್ದು, ಈ ಕುರಿತು ಕಾಂಗ್ರೆಸ್ ಪಕ್ಷ ಕಾನೂನು ಸಮರಕ್ಕೆ ಸಿದ್ದವಾಗಿದೆ ಎಂದರು.
ತೆರಿಗೆ ಸಂಗ್ರಹದಲ್ಲಿ ಸೋರಿಕೆ ಉಂಟಾಗುತ್ತಿದ್ದು, ಅದರಿಂದ ಸರ್ಕಾರ ಹಣಕಾಸಿನ ಬಿಕ್ಕಟ್ಟು ಎದುರಿಸುವಂತಾಗಿದೆ. ಈಗ ಕೇವಲ ಸಾಲದ ಹಣದಲ್ಲಿಯೇ ಸರ್ಕಾರ ನಡೆಯುತ್ತಿದ್ದು, ಈಗಾಗಲೇ ಸುಮಾರು ಐದಾರು ಸಾವಿರ ಕೋಟಿ ರೂ.ಕೊರತೆ ಎದುರಿಸುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.