ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪಿ.ಡಿ.ದಿನಕರನ್ ತಮಿಳುನಾಡಿನಲ್ಲಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿಲ್ಲ ಎಂದು ಹೇಳಿರುವ ಸತ್ಯ ಶೋಧನ ಸಮಿತಿ ವರದಿ ಅವರ ಮೇಲಿರುವ ಆರೋಪ ನಿರಾಧಾರ ಎಂದು ಹೇಳಿದೆ.
ಬೆಂಗಳೂರು ವಕೀಲರ ಕೂಟದ ಮಾಜಿ ಅಧ್ಯಕ್ಷ ಚಂದ್ರಶೇಖರಯ್ಯ, ಕೆ.ಪಿ.ವೆಂಕಟೇಶ್ ಹಾಗೂ ವೇಳಗೋವನ್ ಸೇರಿದಂತೆ ಹಲವರು ತಮಿಳುನಾಡಿಗೆ ಭೇಟಿ ನೀಡಿ ತಯಾರಿಸಲಾಗಿದ್ದ ಸತ್ಯ ಶೋಧನ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತ್ಯ ಶೋಧನ ಸಮಿತಿ ಸದಸ್ಯ ಚಂದ್ರಶೇಖರಯ್ಯ, ಮುಖ್ಯ ನ್ಯಾಯಮೂರ್ತಿ ದಿನಕರನ್ ಅವರು ತಮ್ಮ ತವರು ಜಿಲ್ಲೆ ತಮಿಳುನಾಡಿನ ಮಧುರೈನಲ್ಲಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆಂಬ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು.
ದಿನಕರನ್ ಅವರ ಮೇಲಿರುವ ಆರೋಪದ ಕುರಿತು ಶೋಧನೆ ನಡೆಸುವ ಕುರಿತು ಜನವರಿ 10ರಂದು ಸತ್ಯಶೋಧನ ಸಮಿತಿ ತಮಿಳುನಾಡಿನ ಕಾವೇರಿ ರಾಜಾಪುರಂಗೆ ಭೇಟಿ ನೀಡಿತ್ತು.
ದಿನಕರನ್ ಮೇಲಿರುವ ಆರೋಪ ಆಧಾರರಹಿತವಾಗಿದ್ದು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.