'ನಾನು ಪ್ರಧಾನಿ ಗದ್ದುಗೆ ಏರಿ ತಪ್ಪು ಮಾಡಿದೆ. ಇದೇ ತಪ್ಪಿನಿಂದಾಗಿಯೇ ರಾಜ್ಯದಲ್ಲಿ ರೈತರಿಗೆ ಅನ್ಯಾಯ ಆಗಲು ಕಾರಣವಾಯಿತು' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಲವತ್ತುಕೊಂಡಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ರೈತರು ಒಂದಿಂಚೂ ಭೂಮಿಯನ್ನು ಕಾನೂನು ಬಾಹಿರವಾಗಿ ಕೊಡಲು ಬಿಟ್ಟಿರಲಿಲ್ಲ. ಆದರೆ, ಪ್ರಧಾನಿ ಆದ ನಂತರ ರೈತರ ಜಮೀನನ್ನು ಕಾನೂನು ಬಾಹಿರವಾಗಿ ಸ್ವಾಧೀನಪಡಿಸಿಕೊಳ್ಳುತ್ತ ಬಂದಿದ್ದಾರೆ. ಇದರಿಂದ ದೇಶದ ಬೆನ್ನೆಲುಬಾದ ರೈತ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ ಎಂದು ವಿಷಾದಿಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರ ನಿಧನಕ್ಕೆ ಸಂತಾಪ ಸೂಚಿಸುವ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡರು, ನೈಸ್ ವಿರುದ್ಧದ ಹೋರಾಟವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದರು.
ನೈಸ್ ವಿರುದ್ಧದ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧವಲ್ಲ, ಅನ್ಯಾಯಕ್ಕೊಳಗಾರಿರುವ ನೂರಾರು ರೈತರ ಪರವಾದ ಹೋರಾಟವಾಗಿದೆ ಎಂದರು.
ರೈತರ ಹೆಸರು ಹೇಳಿ ಅಧಿಕಾರದ ಗದ್ದುಗೆಗೆ ಏರಿದ ಬಿಜೆಪಿ ಸರ್ಕಾರ ಇದೀಗ ರೈತರ ಮೇಲೆ ಲಾಠಿ ಪ್ರಹಾರ, ಜಮೀನು ಸ್ವಾಧೀನದಂತಹ ಕೀಳುಮಟ್ಟದ ರಾಜಕೀಯಕ್ಕೆ ಇಳಿದಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.