ಬಿಬಿಎಂಪಿ ಚುನಾವಣೆ ನಡೆಯುವ ಕುರಿತಂತೆ ಮುಂದುವರಿದ ಅನಿಶ್ಚಿತತೆ ನಡುವೆಯೂ ಕಾಂಗ್ರಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಉತ್ಸಾಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಅಭ್ಯರ್ಥಿಗಳಾಗಲು ನೂರಾರು ಮಂದಿ ಆಕಾಂಕ್ಷಿಗಳು ಕಾಂಗ್ರೆಸ್ನಿಂದ ಟಿಕೆಟ್ ಬಯಸಿದ್ದು, ಆ ನಿಟ್ಟಿನಲ್ಲಿ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದೆ. ಇದೀಗ ಪಕ್ಷದ ಮಹಾನಗರ ಘಟಕ ಹಾಗೂ ನಗರ ಜಿಲ್ಲಾ ಘಟಕಗಳ ಕಚೇರಿ ಇರುವ ಶಿವಾಜಿನಗರ ಬಳಿಯ ಕಚೇರಿಯಲ್ಲಿ ದೊಡ್ಡ ಸರತಿಯ ಸಾಲೇ ಕಂಡುಬಂದಿದೆ.
ಈಗಾಗಲೇ ಸಾವಿರಾರು ಆಕಾಂಕ್ಷಿಗಳು ಅರ್ಜಿ ಪಡೆದಿದ್ದು, ತಲಾ 5ಸಾವಿರ ರೂ.ಶುಲ್ಕದೊಂದಿಗೆ ಅರ್ಜಿಗಳನ್ನು ಹಿಂದಿರುಗಿಸಲು ಪಕ್ಷದ ಕಚೇರಿಗೆ ಆಗಮಿಸುವವರ ದಂಡು ಹೆಚ್ಚಾಗತೊಡಗಿದೆ. ಒಂದೆಡೆ ಬಿಬಿಎಂಪಿ ಚುನಾವಣೆಗೆ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಕಾಣಿಸಿಕೊಂಡಿದ್ದರೆ, ಮತ್ತೊಂದೆಡೆ ಮೀಸಲಾತಿ ಕುರಿತ ವಿವಾದದ ಅರ್ಜಿ ಸುಪ್ರೀಂಕೋರ್ಟ್ ಕಟಕಟೆಯಲ್ಲಿದೆ. ಒಟ್ಟಾರೆ ಸುಪ್ರೀಂ ತೀರ್ಪಿನ ಮೇಲೆ ಬಿಬಿಎಂಪಿ ಚುನಾವಣೆ ಭವಿಷ್ಯ ನಿಂತಿದೆ.