ದೇವರಹಿಪ್ಪರಿಗೆ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದ ನನ್ನ ಸೋಲಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಕಾರಣ ಎಂದು ಮಾಜಿ ಸಂಸದ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನನ್ನು ದೊಡ್ಡ ಶತ್ರು ಎಂದು ಪರಿಗಣಿಸಿದ್ದ ಯಡಿಯೂರಪ್ಪನವರು, ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಕೋಟ್ಯಂತರ ರೂ.ನೀಡುವ ಮೂಲಕ ಅದರಲ್ಲಿ ತಮ್ಮನ್ನು ಸೋಲಿಸಿದರು. ಜಾತಿ ಹೆಸರಲ್ಲಿ ರಾಜ್ಯವನ್ನಾಳುತ್ತಿರುವ ಬಿಜೆಪಿ ಸರ್ಕಾರ ಕೋಮು ಭಾವನೆ ಕೆರಳಿಸಿ ಹಿಂದೂ-ಮುಸ್ಲಿಂ ಜಗಳಕ್ಕೆ ಕಾರಣವಾಗಿದೆ. ಒಟ್ಟಾರೆ ಪಕ್ಷದಲ್ಲಿ ನೈತಿಕತೆ ಕಿಂಚಿತ್ತೂ ಉಳಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಪರೇಷನ್ ಕಮಲದ ಹೆಸರಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯ ಮಾಡಿದೆ. ಪಕ್ಷದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಸರ್ಕಾರ ಪತನದೊಂದಿಗೆ ರಾಜ್ಯದಲ್ಲಿ ಬಿಜೆಪಿ ನಿರ್ನಾಮವಾಗಲಿದೆ ಎಂದು ಭವಿಷ್ಯ ನುಡಿದ ಅವರು, ಈಗಾಗಲೇ ಹಲವು ರಾಜಕಾರಣಿಗಳು ಬಿಜೆಪಿ ಬಿಟ್ಟು ಜೆಡಿಎಸ್ ಮತ್ತು ಕಾಂಗ್ರೆಸ್ನತ್ತ ವಾಲುತ್ತಿದ್ದಾರೆ ಎಂದರು.